ಐದು ಕಡೆ ಎನ್ಐಎ ದಾಳಿ; ಉಗ್ರ ಜಾಲದ ಮಹತ್ವದ ಸುಳಿವು ಪತ್ತೆ
ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೆಂಗಳೂರು, ಕೋಲಾರದಲ್ಲಿ ಒಟ್ಟು ಐದು ಕಡೆ ದಾಳಿ ಮಾಡಿ ಉಗ್ರರಿಗೆ ನೆರವಾಗುತ್ತಿದ್ದ ಮೂವರನ್ನು ಬಂಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಆಗಿದ್ದ ಚಾಂದ್ ಪಾಷಾ ಅನೀಸ್ ಹಾಗೂ ಫಾತಿಮಾ ಎನ್ನುವವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಲಾಗಿದ್ದು, ದಾಳಿ ವೇಳೆ ಎನ್ಐಎ ಅಧಿಕಾರಿಗಳು 2 ವಾಕಿಟಾಕಿ, ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಫಾತಿಮಾ ಉಗ್ರ ಕೃತ್ಯದಲ್ಲಿ ಜೈಲು ಪಾಲಾಗಿರುವ ಟಿ.ನಾಸೀರ್ ಎಂಬಾತನ ತಾಯಿ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳನ್ನು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರುವಂತೆ ಟಿ.ನಾಸೀರ್ ಪ್ರಚೋದನೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೈಡ್ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್ನನ್ನು ವಶಕ್ಕೆ ಪಡೆದು ಎನ್ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್ ಜೈಲಿನಲ್ಲಿದ್ದಾನೆ.
ಕೋರ್ಟ್ಗಳಲ್ಲಿ ಹಣ ಎಕ್ಸ್ಚೇಂಜ್ ಮಾಡಲು ಎಎಸ್ಐ ಚಾಂದ್ ಪಾಷಾ ಸಹಾಯ ಮಾಡಿದ್ದ. ನಾಸೀರ್ ವೈದ್ಯರಿಂದ ಮೊಬೈಲ್ ಪಡೆಯುತ್ತಿದ್ದ. ಜೀವಂತ ಗ್ರೆನೇಡ್ ಕೇಸ್ನಲ್ಲಿ ಜುನೈದ್ ಎಸ್ಕೇಪ್ ಆಗಿದ್ದಾನೆ.
ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬುವರಿಗೆ ಎನ್.ಐ.ಎ ನೋಟೀಸ್ ನೀಡಿದೆ. ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಗೌಡ ಮನೆಯಲ್ಲಿ ಲಭ್ಯವಿಲ್ಲದ ಕಾರಣ ಕುಟುಂಬಸ್ಥರಿಗೆ ಎನ್ಐಎ ನೋಟೀಸ್ ನೀಡಿದ್ದು, ಇಂದು 10 ಗಂಟೆಗೆ ಬೆಂಗಳೂರು ಎನ್.ಐ.ಎ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
























