1.10 ಲಕ್ಷ ಸಿಬ್ಬಂದಿಗೆ ಶೇ.25 ವೇತನ ಹೆಚ್ಚಿಸಲು ಒತ್ತಾಯ
ಬೆಂಗಳೂರು: ಸರ್ಕಾರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವ ಮಾತಿಗೆ ತಪ್ಪಿರುವುದರಿಂದ ಮುಷ್ಕರ ಹೂಡಲು ಸಾರಿಗೆ ನೌಕರರು ಚಿಂತಿಸುತ್ತಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಇಂದು ನಾಲ್ಕು ನಿಗಮದ ನೌಕರ ಸಂಘಟನೆಗಳ ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ಮುಷ್ಕರ ಹೂಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರಿಗೆ ನೌಕರರು ವೇತನ ಏರಿಕೆಯೂ ಸೇರಿದಂತೆ ಸರ್ಕಾರದ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಕಳೆದ ವರ್ಷ ಕೂಡ ಬಸ್ ನಿಲ್ಲಿಸಿ ಮುಷ್ಕರ ಹೂಡುವ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ ಕಳೆದ ಡಿಸೆಂಬರ್ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮೂಲಕ ಮುಖ್ಯಮಂತ್ರಿಗಳ ಭೇಟಿಯ ಭರವಸೆ ನೀಡಿ ಮುಷ್ಕರಕ್ಕೆ ಮುಂದಾಗದಂತೆ ಮನವಿ ಮಾಡಿ ಮನವೊಲಿಸಿದ್ದರು. ಅದಾದ ಬಳಿಕ ಮತ್ತೆ ಸಿಎಂ ಭೇಟಿಯಾಗಿದ್ದ ಸಂಘಟನೆಯ ಮುಖಂಡರಿಗೆ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು. ಆದರೆ ಭರವಸೆ ನೀಡಿ ತಿಂಗಳುಗಳೇ ಉರುಳಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಇಂದು ಮುಷ್ಕರದ ಬಗ್ಗೆ ನಿರ್ಧಾರ ಮಾಡಲು ಮುಂದಾಗಿದ್ದಾರೆ.
ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎನ್ನುವುದು ನೌಕರರ ಪ್ರಮುಖ ಬೇಡಿಕೆ. ಒಟ್ಟು ನಾಲ್ಕು ನಿಗಮಗಳು ಸೇರಿ 1.10 ಲಕ್ಷ ಸಿಬ್ಬಂದಿಯಿದ್ದು, ಎಲ್ಲರಿಗೂ ವೇತನ ಹೆಚ್ಚಳ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಇಂದು ಸಂಜೆ 4 ಗಂಟೆಗೆ ಸಭೆಯಲ್ಲಿ ಎಲ್ಲ ನೌಕರರ ಸಂಘಟನೆಗಳು ಭಾಗಿಯಾಗಿ ಅಂತಿಮ ನಿರ್ಧಾರ ಮಾಡಲಿವೆ.
























