ಮಂಜೇಶ್ವರ ವರ್ಕಾಡಿಯಲ್ಲಿ ತಾಯಿಯನ್ನು ದಹಿಸಿ ಕೊಂದ ಪ್ರಕರಣ
ಕಾಸರಗೋಡು : ತನಗೆ ಮದುವೆ ಮಾಡದ್ದಕ್ಕಾಗಿ ಮತ್ತು ಆಸ್ತಿಗಾಗಿ ತಾಯಿಯನ್ನು ಕೊಂದಿರುವುದಾಗಿ ವರ್ಕಾಡಿ ಕೊಲೆ ಪ್ರಕರಣದ ಆರೋಪಿ ಮೆಲ್ವಿನ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೇರೋ (59) ಅವರನ್ನು ಪುತ್ರನೇ ಬೆಂಕಿ ಹಚ್ಚಿ ಜಿಂವಂತ ಸುಟ್ಟುಕೊಂದ ಪ್ರಕರಣ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಆರೋಪಿ ತನ್ನ ಸೋದರತ್ತೆಯನ್ನೂ ಇದೇ ಮಾದರಿ ಸಾಯಿಸಲು ಯತ್ನಿಸಿದ್ದ. ಅವರು ತಪ್ಪಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ಬೈಂದೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಮಾಹಿತಿ ನೀಡಿದ್ದಾನೆ.
ಆರೋಪಿ ಆಸ್ತಿ ಹಾಗೂ ಹಣಕ್ಕಾಗಿ ಈತ ಕೃತ್ಯ ನಡೆಸಿದ್ದಾನೆ. ಕೆಲ ದಿನಗಳಿಂದ ಈತ ತಾಯಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಮಾತ್ರವಲ್ಲ ತನಗೆ ಮದುವೆಯಾಗಲು ಹಣಕೊಡುವಂತೆ ಒತ್ತಾಯಿತ್ತಿದ್ದ. ಪಾನಮತ್ತನಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ತನಗೆ ವಿವಾಹ ಮಾಡಿಕೊಡಬೇಕು, ಇದಕ್ಕಾಗಿ ಹಣ ನೀಡುವಂತೆ ಮೆಲ್ವಿನ್ ತಾಯಿಯಯನ್ನು ಒತ್ತಾಯಿಸುತ್ತಿದ್ದ. ಇದಲ್ಲದೆ ಆಸ್ತಿಯನ್ನು ವಿವಾಹ ಬಳಿಕ ತನ್ನ ಹೆಸರಿಗೆ ಬರೆದು ಕೊಡುವಂತೆ ಹೇಳಿದ್ದು, ಇದಕ್ಕೆ ತಾಯಿ ಹಿಲ್ಡಾ ಡಿಸೋಜ ನಿರಾಕರಿಸಿದ್ದರು. ಈ ದ್ವೇಷದಿಂದ ಕೃತ್ಯ ನಡೆಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಹೊತ್ತಿಗೆಮೆಲ್ವಿನ್ ಸೌದೆಯಿಂದ ಹಿಲ್ಡಾರ ತಲೆಗೆ ಹೊಡೆದಿದ್ದಾನೆ. ನೆಲಕ್ಕೆ ಬಿದ್ದ ಹಿಲ್ಡಾರ ಕತ್ತು ಹಿಸುಕಿ ಕೊಲೆಗೈದ ಬಳಿಕ ಮನೆಯಿಂದ ಎಳೆದೊಯ್ದು ಪ್ಲಾಸ್ಟಿಕ್ , ವಸ್ತ್ರ , ತರಗೆಲೆಯನ್ನು ರಾಶಿ ಹಾಕಿ ಮೃತದೇಹವನ್ನು ಸುಡಲು ಬೆಂಕಿ ಹಚ್ಚಿದ್ದ. ಬಳಿಕ ಸಮೀಪದ ಮನೆಯಲ್ಲಿದ್ದ ಸೋದರತ್ತೆ ಲೋಲಿಟಾರನ್ನು ಮನೆಗೆ ಕರೆಸಿ ಅವರಿಗೂ ಬೆಂಕಿಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಅವೆರು ತಪ್ಪಿಸಿ ಓಡಿ ಅಪಾಯದಿಂದ ಪಾರಾಗಿದ್ದಾರೆ. ಶೇಕಡಾ 40ರಷ್ಟು ಸುಟ್ಟ ಗಾಯಗೊಂಡಿರುವ ಲೋಲಿಟಾ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಗೆ ತಾಯಿ ಹಣ ನೀಡಲು ಲೋಲಿಟಾ ಅಡ್ಡಿ ಪಡಿಸುತ್ತಿದ್ದಾರೆಂಬ ಸಂಶಯದಿಂದ ಮೆಲ್ವಿನ್ ಲೋಲಿಟಾರ ಕೊಲೆಗೂ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಬಳಿಕ ಪರಾರಿಯಾಗಿದ್ದ ಮೆಲ್ವಿನ್ ಈ ಹಿಂದೆ ಕೆಲಸ ಮಾಡುತ್ತಿದ್ದ ಬೈಂದೂರು ಸಮೀಪದ ಕ್ವಾರಿಗೆ ತಲುಪಿ ತಲೆಮರೆಸಿಕೊಂಡಿದ್ದನು. ಮೊಬೈಲ್ ಫೋನ್ ಲೊಕೇಶನ್ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಕೂಲಿ ಕೆಲಸ ನಿರ್ವಹಿಸುತ್ತಿದ್ದ ಮೆಲ್ವಿನ್ ಕೆಲ ವಾರಗಳಿಂದ ಕೆಲಸಕ್ಕೆ ತೆರಳುತ್ತಿರಲಿಲ್ಲ. ಪಾನಮತ್ತನಾಗಿ ಮನೆಗೆ ಬಂದು ತಾಯಿಗೆ ಕಿರುಕುಳ ನೀಡುತ್ತಿದ್ದ. ಆರೋಪಿಯನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
























