ತಾಳಧ್ವಜ ರಥ ರಥ ಎಳೆಯಲು ತಳ್ಳಾಟ ನಡೆದಾಗ ಅವಘಡ
ಭುವನೇಶ್ವರ : ಒಡಿಶಾದ ಪುರಿಯ ಜಗತ್ಪ್ರಸಿದ್ಧ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮೃತಪಟ್ಟು 500ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಲಭದ್ರನ ರಥವನ್ನು ಎಳೆಯಲು ಭಾರಿ ಜನಸಮೂಹ ಮುಂದಕ್ಕೆ ಬಂದಾಗ ಕಾಲ್ತುಳಿದಂಥ ಪರಿಸ್ಥಿತಿ ತಲೆದೋರಿದೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತದ ರೀತಿಯ ಘಟನೆ ಸಂಭವಿಸಿದೆ.
ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಉತ್ಸವ ಜಗನ್ನಾಥ ದೇವಾಲಯದಿಂದ ತನ್ನ ಸಹೋದರರಾದ ಬಲಭದ್ರ ಮತ್ತು ದೇವತೆ ಸುಭದ್ರಾ ಅವರೊಂದಿಗೆ ಸುಮಾರು 2.5 ಕಿಲೋಮೀಟರ್ ದೂರದಲ್ಲಿರುವ ಗುಂಡಿಚ ದೇವಾಲಯಕ್ಕೆ ಭಗವಾನ್ ಜಗನ್ನಾಥನ ಪ್ರಯಾಣವನ್ನು ಸೂಚಿಸುತ್ತದೆ. ಈ ದೇವತೆಗಳು ಗುಂಡಿಚ ದೇವಾಲಯದಲ್ಲಿ ಒಂದು ವಾರ ವಾಸಿಸುತ್ತಾರೆ ಮತ್ತು ನಂತರ ಇದೇ ರೀತಿಯ ಮೆರವಣಿಗೆಯಲ್ಲಿ ಹಿಂತಿರುಗುತ್ತಾರೆ.
ತಾಳಧ್ವಜ ರಥದ ಪವಿತ್ರ ಹಗ್ಗಗಳನ್ನು ಹಿಡಿಯಲು ಉತ್ಸುಕರಾಗಿ ಭಕ್ತರು ಧಾವಿಸಿದಾಗ ಜನದಟ್ಟಣೆಯಿಂದಾಗಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ, 500ಕ್ಕೂ ಹೆಚ್ಚು ಜನರು ಗಾಯಗೊಂಡರು. ಹೆಚ್ಚಿನವರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದರೂ, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ ಜನಸಂದಣಿಯನ್ನು ನಿರ್ವಹಿಸಲು ಮತ್ತು ಭದ್ರತೆಯನ್ನು ವಹಿಸಲು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 8 ತುಕಡಿಗಳು ಸೇರಿದಂತೆ ನಗರದಾದ್ಯಂತ ಸುಮಾರು 10,000 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೂ ಜನಸಂದಣಿಯನ್ನು ನಿಭಾಯಿಸಲು ಪೊಲೀಸರು ಹೆಣಗಾಡಬೇಕಾಯಿತು. ಒಂದು ಅಂದಾಜಿನ ಪ್ರಕಾರ ನಿನ್ನೆ ರಾತ್ರಿ ನಡೆದ ರಥೋತ್ಸವ ಸಂದರ್ಭದಲ್ಲಿ ಸುಮಾರು 10 ಲಕ್ಷ ಭಕ್ತರು ಜಮಾಯಿಸಿದ್ದರು.
ಮೃತವ್ಯಕ್ತಿಯನ್ನು ಒಡಿಶಾದ ಬಲಂಗೀರ್ ಜಿಲ್ಲೆಯ ಲಲಿತ್ ಬಗರ್ತಿ ಎಂದು ಗುರುತಿಸಲಾಗಿದೆ. ಜಗನ್ನಾಥ ದೇವಸ್ಥಾನದ ಸಿಂಹದ್ವಾರದಿಂದ ಸುಮಾರು 200 ಮೀಟರ್ ದೂರದಲ್ಲೆ ಹಿಂದಿ ಶಾಲೆ ಬಳಿ ಈ ದುರ್ಘಟನೆ ನಡೆದಿದೆ. ರಥವನ್ನು ಎಳೆಯಲು ಜನರು ತಳ್ಳಾಟ ನಡೆಸಿದ್ದೇ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.
























