ನೌಕಾ ನೆಲೆಯ ಮಾಹಿತಿ ರವಾನಿಸಿದ್ದ ಪಾಕ್ ಏಜೆಂಟ್
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗ ಬಂಧಿಸಿದೆ. ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ ವಿಶಾಲ್ ಯಾದವ್ ಸೆರೆಯಾದ ಪಾಕ್ ಏಜೆಂಟ್. ಈತ ನೌಕಾಪಡೆ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ.
ಡಾಕ್ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ ವಿಶಾಲ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಶರ್ಮಾ ಎಂಬಾಕೆಯ ಜೊತೆ ಸಂಪರ್ಕದಲ್ಲಿದ್ದ. ನೌಕಾ ಕಾರ್ಯಾಚರಣೆಯ ನಿರ್ಣಾಯಕ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಪಡೆಯಲು ಆಕೆ ವಿಶಾಲ್ ಯಾದವ್ಗೆ ಹಣದ ಆಮಿಷ ಒಡ್ಡಿದ್ದಳು. ಈ ಪ್ರಿಯಾ ಶರ್ಮ ಪಾಕಿಸ್ಥಾನದ ನಕಲಿ ವ್ಯಕ್ತಿಯಾಗಿ ಎನ್ನಲಾಗಿದೆ.
ಯಾದವ್ ಆನ್ಲೈನ್ ಗೇಮಿಂಗ್ ವ್ಯಸನಿಯಾಗಿ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಆತ ಸೂಕ್ಚ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ. ಈತನಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣವನ್ನು ಪಾವತಿಸಲಾಗುತ್ತಿತ್ತು. ಫೋನ್ ಚಾಟ್ ವಿವರ ಸೇರಿದಂತೆ ಹಲವು ದಾಖಲೆಗಳಿಂದ ಈತ ಮಾಹಿತಿ ಸೋರಿಕೆ ಮಾಡಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಈತ ದೀರ್ಘಕಾಲದಿಂದ ಬೇಹುಗಾರಿಕೆ ಮಾಡುತ್ತಿದ್ದು, ಅದರಲ್ಲೂ ಆಪರೇಷನ್ ಸಿಂದೂರ ಸಮಯದಲ್ಲಿ ನೌಕಾ ಸೇನೆಯ ರಹಸ್ಯ ವಿವರ ಸೋರಿಕೆ ಮಾಡಿದ್ದ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
























