ಬಹಿರಂಗ ಹೇಳಿಕೆ ನೀಡಿ ಮುಜುಗರವುಂಟು ಮಾಡದಂತೆ ತಾಕೀತು
ಬೆಂಗಳೂರು: ವಸತಿ ಇಲಾಖೆಯ ಭ್ರಷ್ಟಾಚಾರ ಮತ್ತು ಅನುದಾನ ಸಿಗದ ಕುರಿತು ಧ್ವನಿಯೆತ್ತಿದ್ದ ಕಾಂಗ್ರೆಸ್ನ ಇಬ್ಬರು ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೂಡಲೇ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದ ಅಸಮಾಧಾನಿತ ಶಾಸಕ ರಾಜು ಕಾಗೆ ಹಾಗೂ ಭ್ರಷ್ಟಾಚಾರ ಬಾಂಬ್ ಸಿಡಿಸಿದ ಶಾಸಕ ಬಿ.ಆರ್ ಪಾಟೀಲ್ ಅವರನ್ನ ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಆರ್ ಪಾಟೀಲ್ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನೀನು ಪದೇ ಪದೆ ಈ ರೀತಿ ಮಾತನಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದೀಯಾ, ಇದು ಸರಿಯಲ್ಲ ಎಂದು ತರಾಟೆಗೆತ್ತಿಕೊಂಡಿದ್ದಾರೆ. ಆಡಿಯೋ ಬಗ್ಗೆ ಸಮಾಜಾಯಿಷಿ ಕೊಡಲು ಮುಂದಾಗಿದ್ದ ಬಿ.ಆರ್ ಪಾಟೀಲ್ಗೆ ಆಡಿಯೋ ಬಹಿರಂಗ ಪಡಿಸಿದ್ದು ಯಾರು? ನೀನಲ್ವಾ ಎಂದು ಸಿಎಂ ಗರಂ ಆಗಿದ್ದಾರೆ. ನೀನು ಆಡುವ ಮಾತು ಈ ಬೆಳವಣಿಗೆ ಸರ್ಕಾರ ಹಾಗೂ ಪಕ್ಷ ಎರಡಕ್ಕೂ ಡ್ಯಾಮೇಜ್ ಮಾಡಿದೆ. ನನಗೆ ವೈಯುಕ್ತಿಕವಾಗಿ ಪದೇಪದೆ ಮುಜುಗರ ಆಗುವಂತೆ ಮಡುತ್ತಿದ್ದೀಯಾ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಸಕ ರಾಜು ಕಾಗೆ ಹಾಗೂ ಮಾಗಡಿ ಬಾಲಕೃಷ್ಣ ಇಬ್ಬರಿಗೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಇರಲಿ. ಯಾವುದೇ ಬಹಿರಂಗ ಹೇಳಿಕೆ ಬೇಡ. ಹೈಕಮಾಂಡ್ ಈ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಿಮ್ಮ ಮಾತು ನಡೆನುಡಿಯಿಂದ ಸಮಸ್ಯೆ ಮಾಡಿಕೊಳ್ಳಬೇಡಿ, ಏನೇ ಇದ್ದರು ನನ್ನನ್ನು ನೇರವಾಗಿ ಭೇಟಿ ಮಾಡಿ ಎಂದು ಸಿಎಂ ತಾಕೀತು ಮಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
























