ಸಕಲೇಶಪುರ: ಬೆಂಗಳೂರು – ಮಂಗಳೂರು ನಡುವಿನ ರೈಲು ಹಳಿಯ ಮೇಲೆ ಬಿದ್ದ ಮೂರು ಬಂಡೆಗಳನ್ನು ತೆರವು ಮಾಡಲಾಗಿದ್ದು, ರೈಲು ಸಂಚಾರ ಪುನರಾರಂಭವಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಗುಡ್ಡ ಕುಸಿತದ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎಂದು ಭಾವಿಸಲಾಗಿತ್ತಾದರೂ ಆ ಬಳಿಕ ರೈಲ್ವೆ ವ್ಯಾಗನ್ನಲ್ಲಿ ಸಾಗಿಸುತ್ತಿದ್ದ ಬಂಡೆಗಳು ಉರುಳಿ ಬಿದ್ದು ಈ ಘಟನೆ ನಡೆದಿರುವುದು ತಿಳಿದು ಬಂದಿದ್ದಾಗಿಯೂ ಇಲಾಖೆ ಹೇಳಿದೆ.
ಇಂದು (ಜೂ. 21) ಬೆಳಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ರೈಲ್ವೆ ಕಾರ್ಯಾಚರಣೆಗಾಗಿ ಸಾಗಿಸುತ್ತಿದ್ದ ಬಂಡೆಗಳ ಪೈಕಿ 3 ಬಂಡೆಗಳು ಹಳಿಯ ಮೇಲೆ ಉರುಳಿದ್ದವು. ಸದ್ಯ ಸುಮಾರು 5 ಗಂಟೆಗಳ ಕಾರ್ಯಾಚರಣೆ ನಡೆಸಿ ರೈಲ್ವೆ ಸಿಬ್ಬಂದಿ ಹಳಿಗೆ ಬಿದ್ದಿದ್ದ ಬಂಡೆಗಳನ್ನು ತೆರವು ಮಾಡಿ ರೈಲ್ವೆ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.
























