ಐಶ್ವರ್ಯಾ ಗೌಡ ಜುವೆಲ್ಲರಿ ಅಂಗಡಿ ಮಾಲೀಕನಿಗೆ 9 ಕೋ.ರೂ. ವಂಚಿಸಿದ ಪ್ರಕರಣ
ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಜೂ.23ರಂದು ವಿಚಾರಣೆಗೊಳಪಡಿಸಲಿದೆ. ಇ.ಡಿ.ಯಿಂದ ಸಮನ್ಸ್ ಜಾರಿಯಾಗಿರುವುದು ನಿಜ. ಅದರಂತೆ ಜೂ. 23ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.
ಅಧಿಕಾರಿಗಳು ಮನೆಗೆ ಬಂದು ಸಮನ್ಸ್ ನೀಡಿದಾಗ ನಾನು ಮನೆಯಲ್ಲಿ ಇರಲಿಲ್ಲ. ಅನಂತರ ಮನೆಗೆ ಬಂದು ಯಾವ ವಿಚಾರವಾಗಿ ಸಮನ್ಸ್ ಎಂದು ನೋಡಿದಾಗ ಐಶ್ವರ್ಯ ಗೌಡ ಕೇಸ್ ಎಂಬುದು ಗೊತ್ತಾಯಿತು. ಜೂನ್ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಅಂದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಬರುವ ಜೂನ್ 23ರಂದು ಹಾಜರಾಗುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಅಕೌಂಟ್ ಟ್ರಾನ್ಸಾಕ್ಷನ್ ನಡೆಸಿರಲಿಲ್ಲ. ಐಶ್ವರ್ಯಾ ಗೌಡ ನಮ್ಮ ಕ್ಷೇತ್ರದವರು. ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಎನ್ನುವ ಹೆಸರಲ್ಲಿ ಹೀಗೆಲ್ಲ ಮಾಡಿದ್ದಾರೆಂಬುದು ತಿಳಿದ ಕೂಡಲೇ ಸ್ವತಃ ನಾನೇ ದೂರು ಕೊಟ್ಟಿದ್ದೇನೆ. ಇಡಿಯವರು 7ರಿಂದ 8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಅದನ್ನು ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತನ್ನ ಸಹೋದರ ಇ.ಡಿ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಕಾನೂನು ಪ್ರಕ್ರಿಯೆಗೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಐಶ್ವರ್ಯ ಗೌಡ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪ ಎದುರಿಸುತ್ತಿದ್ದಾಳೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚಿಸಿದ್ದಾರೆ ಎಂಬ ಆರೋಪವಿದೆ. ಡಿ.ಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದಾಳೆ. ಬಂಧನವಾಗಿ ಈಗ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾಳೆ. ಹೀಗೆ ಈ ಪ್ರಕರಣ ಡಿ.ಕೆ.ಸುರೇಶ್ಗೆ ತಳಕು ಹಾಕಿಕೊಂಡಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿ.ಕೆ ಸುರೇಶ್ ದೂರು ನೀಡಿದ್ದರು.