ಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ?

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಇರಾನ್‌ನಲ್ಲಿ ಹೆಚ್ಚಾದ ಭೀತಿ

ತೈಲ, ಗ್ಯಾಸ್‌ ಬೆಲೆ ಏರಿಕೆ ಆತಂಕ

ಟೆಹ್ರಾನ್‌ : ಇರಾನ್​​ನ ರಾಜಧಾನಿ ಟೆಹ್ರಾನ್ ಬಿಟ್ಟುಹೋಗುವಂತೆ ಅಲ್ಲಿನ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿರುವುದು ಇಸ್ರೇಲ್‌-ಇರಾನ್‌ ಸಮರದಲ್ಲಿ ಅಮೆರಿಕವೂ ಭಾಗಿಯಾಗುತ್ತಾ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಂದು ವೇಳೆ ಅಮೆರಿಕ ನೇರವಾಗಿ ರಣರಂಗಕ್ಕೆ ಇಳಿದರೆ ಘನಘೋರ ಸಮರ ನಡೆಯುವ ಭಿತಿ ಉಂಟಾಗಿದೆ. ಹೀಗಾದರೆ ಇದರ ಪರಿಣಾಮ ಬರೀ ಇರಾನ್‌ ಮಾತ್ರವಲ್ಲ ಇಡೀ ಜಗತ್ತಿಗೆ ತಟ್ಟಲಿದೆ.



















































 
 

ಟ್ರಂಪ್‌ ಹೇಳಿಕೆಯಿಂದಾಗಿ ಇರಾನ್ ಜನ ತಮ್ಮ ಮೇಲೆ ದೊಡ್ಡ ದಾಳಿ ನಡೆಯುವ ಸಾಧ್ಯತೆ ಇರಬಹುದು ಎಂದು ಆತಂಕಗೊಂಡಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ ತಕ್ಷಣ ಟೆಹ್ರಾನ್ ತೊರೆಯಬೇಕೆಂದು ಪೋಸ್ಟ್ ಮಾಡಿದ್ದಾರೆ. ಇರಾನ್ ತಾನು ಹೇಳಿದ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು ಎಂದು ಹೇಳಿದ್ದಾರೆ. ನಾನು ಸಹಿ ಹಾಕಲು ಹೇಳಿದ ಕೂಡಲೇ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ, ಎಲ್ಲರೂ ತಕ್ಷಣ ಟೆಹ್ರಾನ್‌ನಿಂದ ಸ್ಥಳಾಂತರಗೊಳ್ಳಬೇಕು ಎಂದು ಟ್ರಂಪ್‌ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಹೊತ್ತಲ್ಲಿ ಈ ಪೋಸ್ಟ್​ ಮಾಡಿದ್ದಾರೆ. ಈ ಶೃಂಗದಿಂದ ಟ್ರಂಪ್‌ ಅವಧಿಗೂ ಮೊದಲೇ ನಿರ್ಗಮಿಸಲಿರುವುದು ಯುದ್ಧದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗುವ ಸುಳಿವು ನೀಡಿದೆ.

ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸುಮಾರು 9.5 ಮಿಲಿಯನ್ ಜನ ಇದ್ದಾರೆ. ಸೋಮವಾರ ಟ್ರಂಪ್ ಹೇಳಿಕೆಗೆ ಮೊದಲು, ಇಸ್ರೇಲ್ ಮಿಲಿಟರಿ ಕೂಡ ಮಧ್ಯ ಟೆಹ್ರಾನ್‌ನ ಒಂದು ಭಾಗವನ್ನು ಸ್ಥಳಾಂತರಿಸುವಂತೆ ಎಚ್ಚರಿಕೆ ನೀಡಿತ್ತು. ಇದು 3,30,000 ಜನರ ಮೇಲೆ ಪರಿಣಾಮ ಬೀರುತ್ತದೆ. ಇಸ್ರೇಲ್ ಸ್ಥಳಾಂತರಿಸುವಂತೆ ಎಚ್ಚರಿಕೆ ನೀಡಿರುವ ಟೆಹ್ರಾನ್‌ನ ಭಾಗದಲ್ಲಿ ಇರಾನ್‌ನ ಸರ್ಕಾರಿ ಟಿವಿ ಮತ್ತು ಪೊಲೀಸ್ ಪ್ರಧಾನ ಕಚೇರಿ ಹಾಗೂ ಮೂರು ದೊಡ್ಡ ಆಸ್ಪತ್ರೆಗಳು ಇವೆ.

ಇಸ್ರೇಲ್ ಈಗಾಗಲೇ ಟೆಹ್ರಾನ್‌ನಲ್ಲಿ ಹಲವಾರು ಪ್ರಮುಖ ದಾಳಿಗಳನ್ನು ನಡೆಸಿದೆ, ಇದರಲ್ಲಿ ಮಿಲಿಟರಿ ನೆಲೆಗಳು ಮತ್ತು ನಾಗರಿಕ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡಿದೆ. ಇಸ್ರೇಲ್‌ ದಾಳಿಗಳು ನಡೆಯುತ್ತಿರುವುದರಿಂದ, ಜನರು ಟೆಹ್ರಾನ್ ತೊರೆದು ಇತರ ನಗರಗಳಿಗೆ ತೆರಳುತ್ತಿದ್ದಾರೆ, ಇದರಿಂದಾಗಿ ಭಾನುವಾರ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಪರಿಸ್ಥಿತಿ ಉಂಟಾಗಿತ್ತು. ಟ್ರಂಪ್ ಹೇಳಿಕೆಯ ನಂತರ ಈ ವಲಸೆ ಮತ್ತಷ್ಟು ಹೆಚ್ಚಾಗಿದೆ.

ಕಳೆದ ಶುಕ್ರವಾರ ಇಸ್ರೇಲ್ ಇರಾನ್‌ನ ಪರಮಾಣು ತಾಣ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದಾಗಿನಿಂದ ಎರಡೂ ದೇಶಗಳು ಪರಸ್ಪರ ದಾಳಿ ಮಾಡುತ್ತಿವೆ. ಐದನೇ ದಿನಕ್ಕೆ ಕಾಲಿಟ್ಟಿರುವ ಈ ಯುದ್ಧದಲ್ಲಿ ಇರಾನಿನ ಸುಮಾರು 30 ಮಿಲಿಟರಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸೇರಿದಂತೆ ಸುಮಾರು300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು 1200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲೂ 24 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 250 ಜನರು ಗಾಯಗೊಂಡಿದ್ದಾರೆ.

ಯುದ್ಧದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಆಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ. ಭಾರತಕ್ಕೆ ಪ್ರತಿದಿನ ಸುಮಾರು 39 ಲಕ್ಷ ಬ್ಯಾರೆಲ್ ಕಚ್ಚಾತೈಲದ ಅಗತ್ಯ ಇದೆ. ಶೇಕಡಾ 80ರಷ್ಟು ಕಚ್ಚಾತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಇರಾನ್​ನಿಂದಲೇ ಗರಿಷ್ಠ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯ ಆತಂಕ ಎದುರಾಗಿದೆ. ಇಸ್ರೇಲ್ ದಾಳಿ ಪರಿಣಾಮ ಇರಾನ್​ನಿಂದ ತೈಲ ಸರಬರಾಜು ಕಡಿತಗೊಳ್ಳುವ ಸಾಧ್ಯತೆ ಇದ್ದು, ಭಾರತವೂ ಒಳಗೊಂಡಂತೆ ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಆತಂಕ ಕಂಡು ಬಂದಿದೆ. ಯುದ್ಧಕ್ಕೆ ಪ್ರತಿಕಾರವಾಗಿ ಇರಾನ್‌ ಹೊರ್ಮುಝ್‌ ಜಲಸಂಧಿಯನ್ನು ಮುಚ್ಚಿದರೆ ಏಷ್ಯಾಕ್ಕೆ ತೈಲ ಸರಬರಾಜು ಸ್ಥಗಿತಗೊಳ್ಳಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top