ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಒಂದು ಬದಿ ಸಂಚಾರ ಸ್ಥಗಿತ
ಮಂಗಳೂರು : ಕರಾವಳಿಯಾದ್ಯಾಂತ ನಿನ್ನೆ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲಿ ಕೃತಕ ನೆರೆ ನೀರು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಪಂಪ್ವೆಲ್ನಲ್ಲಿ ಆಳೆತ್ತರಕ್ಕೆ ನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಬೇಕಾಯಿತು. ಸುಮಾರು ಒಂದೂವರೆ ತಾಸು ರಿಕ್ಷಾ ಮತ್ತಿತರ ವಾಹನಗಳ ಸಂಚಾರವನ್ನು ಸ್ಥಗಿತವಾಗಿತ್ತು. ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.

ಮಂಗಳೂರು ಹೊರವಲಯದ ವಾಮಂಜೂರು ಬಳಿಯ ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತವಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಗುಡ್ಡ ಕುಸಿಯಲು ತೊಡಗಿ ಒಂದು ಬದಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ದೊಡ್ಡ ದೊಡ್ಡ ಬಂಡೆಗಳು ಮತ್ತು ಕಲ್ಲುಮಣ್ಣು ರಸ್ತೆಗೆ ಉರುಳಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಹೋಗುತ್ತಿದ್ದಾಗಲೇ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗುಡ್ಡ ಕುಸಿದು ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿದೆ. ಒಂದು ಬದಿಯ ರಸ್ತೆಯಲ್ಲೇ ಎರಡು ಕಡೆಯ ವಾಹನಗಳು ಸಂಚಾರ ನಡೆಸುತ್ತಿವೆ.

ಈ ಹಿಂದೆಯೂ ಕೆತ್ತಿಕಲ್ ಗುಡ್ಡ ಕುಸಿತವಾಗಿತ್ತು. ಪ್ರತಿ ಮಳೆಗಾಲದಲ್ಲಿ ಈ ಗುಡ್ಡ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಈಗ ಈ ಹೆದ್ದಾರಿಯ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಗುಡ್ಡವನ್ನು ಭಾರಿ ಪ್ರಮಾಣದಲ್ಲಿ ಅಗೆದು ತೆಗೆಯಲಾಗಿದೆ. ಕುಸಿತ ತಡೆಯಲು ಟಾರ್ಪಾಲು ಹೊದಿಸಿದ್ದರೂ ಇದೇ ಜಾಗದಲ್ಲಿ ನಿನ್ನೆ ರಾತ್ರಿ ಕುಸಿತ ಸಂಭವಿಸಿದೆ.
ಗುಡ್ಡ ಕುಸಿತ ಜಾಗದಲ್ಲೇ ಮೇಲೆ ಜಾಕ್ವೆಲ್ ನಿರ್ಮಾಣವಾಗಿದ್ದು, ಗುಡ್ಡ ಇನ್ನಷ್ಟು ಕುಸಿದರೆ ಈ ಜಾಕ್ವೆಲ್ ಕೂಡ ಕುಸಿಯುವ ಭೀತಿ ತಲೆದೋರಿದೆ. ಜಡಿಮಳೆಯ ನಡುವೆಯೂ ಸಕಾಲದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ವಾಹನ ಸಂಚಾವರವನ್ನು ನಿಯಂತ್ರಿಸಿದರು.