ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ; ಭಾರತೀಯರಿಗೆ ಎಚ್ಚರಿಕೆ ಸಂದೇಶ ರವಾನೆ
ಟೆಹ್ರಾನ್: ಇರಾನ್ನ ಪರಮಾಣು ಶಸ್ತ್ರಾಸ್ತ್ರ ಸ್ಥಾವರಗಳು ಹಾಗೂ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ನ ಡಜನ್ಗಟ್ಟಲೆ ಜೆಟ್ಗಳು ಶುಕ್ರವಾರ ನಸುಕಿನ ಹೊತ್ತು ನಡೆಸಿದ ಭೀಕರ ದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇರಾನ್ ಈಗಾಗಲೇ ಪ್ರತಿಕಾರದ ನಡೆಯಿಟ್ಟಿದ್ದು, ಕ್ಷಿಪಣಿಗಳನ್ನು ಇಸ್ರೇಲ್ನತ್ತ ಹಾರಿಸಿದೆ.
ಇಸ್ರೇಲ್ ದಾಳಿಯಲ್ಲಿ ಇರಾನ್ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ, ಸಶಸ್ತ್ರ ಪಡೆಗಳ ಡೆಪ್ಯುಟಿ ಕಮಾಂಡರ್ ಘೋಲಮಲಿ ರಶೀದ್ ಹತ್ಯೆಗೀಡಾಗಿದ್ದಾರೆ.ಿದರೊಂದಿಗೆ ಹಲವು ಸೈನಿಕರು ಮತ್ತು ನ್ಯೂಕ್ಲಿಯರ್ ವಿಜ್ಞಾನಿಗಳೂ ಸತ್ತಿದ್ದಾರೆ.
ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಆಪರೇಷನ್ ರೈಸಿಂಗ್ ಲಯನ್ ಕಾರ್ಯಾಚರಣೆಯಲ್ಲಿ ಇರಾನ್ನ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಟೆಹ್ರಾನ್ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ. ದಾಳಿಯಲ್ಲಿ ಇರಾನ್ನ ಕ್ಷಿಪಣಿ ಕಾರ್ಖಾನೆಗಳು, ಯುರೇನಿಯಂ ಸಂಗ್ರಹಣಾ ಕೇಂದ್ರಕ್ಕೂ ಹಾನಿಯಾಗಿರುವುದು ತಿಳಿದುಬಂದಿದೆ.
ಇತ್ತ ಇಸ್ರೇಲ್ ಕೂಡ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಲು ಶುಕ್ರವಾರ ಇರಾನಿನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಇರಾನ್ 15 ಪರಮಾಣು ಬಾಂಬ್ಗಳನ್ನು ತಯಾರಿಸಲು ಸಾಕಷ್ಟು ಸಾಮಗ್ರಿಗಳನ್ನ ಸಂಗ್ರಹ ಮಾಡಿಕೊಂಡಿತ್ತು. ಇದನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಅರೆಸೇನಾ ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಹೊಸೇನ್ ಸಲಾಮಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳೂ ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಹಾಗೂ ಇರಾಕ್ನಲ್ಲಿ ಇರುವ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆಯನ್ನು ನೀಡಿದೆ. ಇರಾನ್ ಹಾಗೂ ಇರಾಕ್ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪ್ರಜೆಗಳು ಜಾಗರೂಕರಾಗಿ ಇರಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರಬೇಕೆಂದು ತಿಳಿಸಿದೆ.