ಅಹಮದಾಬಾದ್‌ವಿಮಾನ ದುರಂತ ಸಾವಿನ ಸಂಖ್ಯೆ 265ಕ್ಕೇರಿಕೆ

ಡ್ರೀಮ್‌ಲೈನರ್‌ನಲ್ಲಿ ಪ್ರಯಾಣಿಸುತ್ತಿದ್ದವರ ಕನಸುಗಳೆಲ್ಲ ಆಕಾಶದಲ್ಲೇ ಸುಟ್ಟು ಕರಕಲಾಯಿತು

1.25 ಲಕ್ಷ ಲೀಟರ್‌ನಷ್ಟು ಪೆಟ್ರೋಲ್‌ ಸ್ಫೋಟಿಸಿ ಭೀಕರ ಅವಘಡ

ನವದೆಹಲಿ: ಡ್ರೀಮ್‌ಲೈನರ್‌ ವಿಮಾನದಲ್ಲಿ ಬದುಕಿನ ನಾನಾ ಕನಸುಗಳನ್ನು ಹೊತ್ತು ಪ್ರಯಾಣಿಸುತ್ತಿದ್ದವರ ಕನಸುಗಳೆಲ್ಲ ಆಕಾಶದಲ್ಲೇ ಹೊತ್ತಿ ಉರಿದು ಕರಟಿ ಹೋಗಿವೆ. ದೇಶ ಕಂಡ ಮಹಾ ವಿಮಾನ ದುರಂತವೊಂದು 265 ಮಂದಿಯ ಪ್ರಾಣ ಕಸಿದುಕೊಂಡಿದೆ.



















































 
 

ಅಹಮದಾಬಾದ್‌ನಲ್ಲಿ ಗುರುವಾರ ಮಧ್ಯಾಹ್ನ ಏರ್‌ ಇಂಡಿಯಾ ವಿಮಾನ ಪತನಗೊಂಡು ಸಂಭವಿಸಿದ ಮಹಾದುರಂತದಲ್ಲಿ ಒಟ್ಟು 265 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 242 ಮಂದಿಯ ಪೈಕಿ ಓರ್ವ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದು, ಉಳಿದವರೆಲ್ಲ ಮೃತಪಟ್ಟಿದ್ದಾರೆ. ವಿಮಾನ ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ಮೇಲೆ ಬಿದ್ದ ಕಾರಣ ಮೆಡಿಕಲ್‌ ವಿದ್ಯಾರ್ಥಿಗಳ ಸೇರಿ ಇತರ 23 ಮಂದಿ ಕೂಡ ಸಾವಿಗೀಡಾಗಿದ್ದಾರೆ. ಇದು ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಸಂಭವಿಸಿದ ಅತಿ ಭೀಕರ ವಿಮಾನ ದುರಂತವಾಗಿದೆ.

ಏರ್‌ ಇಂಡಿಯಾ ವಿಯಾನಯಾನ ಸಂಸ್ಥೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ತಡರಾತ್ರಿ ವೇಳೆಗೆ ಸಾವುನೋವಿನ ಮಾಹಿತಿ ಹಂಚಿಕೊಂಡಿದೆ. ಗುರುವಾರ ಮಧ್ಯಾಹ್ನ ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ಡ್ರೀಮ್‌ಲೈನರ್‌ ವಿಮಾನ ಅಪಘಾತಕ್ಕೀಡಾಗಿದೆ. 12 ವರ್ಷದ ಹಳೆಯ ಬೋಯಿಂಗ್‌ 787-8 ವಿಮಾನವು ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟಿದ್ದು, 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.

ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆಯಾಗಿದ್ದಾರೆ. ಅವರನ್ನು ವಿಶ್ವಾಸ್ ಕುಮಾರ್ ರಮೇಶ್ ಎಂದು ಗುರುತಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡವೆಂಬಂತೆ ಬದುಕುಳಿದಿದ್ದಾರೆ.

ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನವು ರನ್‌ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ ʻಮೇ ಡೇ.. ಮೇ ಡೇ..ʼ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು.

ಏನೇನಾಯಿತು?

  1. ಗುರುವಾರ ಮಧ್ಯಾಹ್ನ ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ಡ್ರೀಮ್‌ಲೈನರ್‌ ವಿಮಾನ ಅಪಘಾತಕ್ಕೀಡಾಗಿದೆ. 12 ವರ್ಷದ ಹಳೆಯ ಬೋಯಿಂಗ್‌ 787-8 ವಿಮಾನವು ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟಿದ್ದು, 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ನಿರೀಕ್ಷಿತ ಎತ್ತರಕ್ಕೆ ಸಾಧ್ಯವಾಗದೆ ಕೆಳಮುಖವಾಗಿ ಸಾಗಿ ಕಟ್ಟಡಕ್ಕೆ ಅಪ್ಪಳಿಸಿ ಭೀಕರವಾಗಿ ಸ್ಫೋಟಗೊಂಡು ಹೊತ್ತಿ ಉರಿದ ವೀಡಿಯೋ ಹಲವರ ಮೊಬೈಲ್‌ಗಳಲ್ಲಿ ಸೆರೆಯಾಗಿದೆ.
  2. ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷರು, 7 ಪೋರ್ಚುಗೀಸರು ಮತ್ತು ಓರ್ವ ಕೆನಡ ದೇಶದವರು. 12 ಸಿಬ್ಬಂದಿಗಳ ಪೈಕಿ ಕೇರಳದ ಓರ್ವ ಗಗನಸಖಿ ಮತ್ತು ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಎನ್ನುವ ಸಹಪೈಲಟ್‌ ಸೇರಿದ್ದಾರೆ. 11ಎ ಸೀಟಿನಲ್ಲಿ ಕುಳಿತಿದ್ದ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾರೆ.
  3. ವಿಮಾನ ಮೆಎಇಕಲ್‌ ಕಾಲೇಜಿನ ಹಾಸ್ಟೆ ಮೇಲೆ ಪತನಗೊಂಡಿದ್ದು. ಈ ಸಂದರ್ಭ ಅನೇಕ ಮೆಡಿಕಲ್‌ ವಿದ್ಯಾರ್ಥಿಗಳು ಊಟಕ್ಕಾಗಿ ಮೆಸ್‌ನಲ್ಲಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಯಿತು. ಸೇನೆ, ಎನ್‌ಡಿಆರ್‌ಎಫ್‌, ಸಿಐಎಸ್‌ಎಫ್‌ ಸೇರಿದಂತೆ ಹಲವು ತಂಡಗಳು ಪರಿಹಾರ ಕಾರ್ಯಾಚರಣೆಗೆ ಧಾವಿಸಿವೆ.
  4. ವಿಮಾನದಲ್ಲಿದ್ದ 1.25 ಲಕ್ಷ ಲೀಟರ್‌ನಷ್ಟು ಪೆಟ್ರೋಲ್‌ ಹೊತ್ತಿ ಉರಿದ ಕಾರಣ ಪತನಗೊಂಡ ಸ್ಥಳದಲ್ಲಿ ಉಷ್ಣತೆ 1000 ಸೆಲ್ಸಿಯಸ್‌ ಡಿಗ್ರಿಯಷ್ಟಿತ್ತು. ಹೀಗಾಗಿ ಪರಿಹಾರ ಕಾರ್ಯಾಚರಣೆ ಸಿಬ್ಬಂದಿಗೆ ಕೂಡಲೇ ಪತನ ಸ್ಥಳಕ್ಕೆ ಹಜೋಗಲು ಸಾಧ್ಯವಾಗಲಿಲ್ಲ ಎಂದು ನಿನ್ನೆಯೇ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.
  5. ಪ್ರಧಾನಮಂತ್ರಿ ನರೇಂದ್ರ ಮೋದಿ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅವರು ಇಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ವಾಯುಯಾನ ಸಚಿವ ರಾಮ್‌ಮೋಹನ್‌ ರೆಡ್ಡಿ ನಿನ್ನೆಯೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದಾರೆ.
  6. ವಿಮಾನ ಟೇಕಾಫ್‌ ಆದ ಕೂಡಲೇ ಪೈಲಟ್‌ ಮೇ ಡೇ ಸಂದೇಶ ಕಳುಹಿಸಿದ್ದರು. ಇದರ ಅರ್ಥ ವಿಮಾನ ತೀವ್ರ ಅಪಾಯದಲ್ಲಿದೆ ಎಂದು. ದುರಂತದ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ.
  7. ಬೋಯಿಂಗ್‌ 787 ಡ್ರೀಮ್‌ಲೈನರ್‌ ವಿಮಾನ ಪತನಗೊಂಡ ಮೊದಲ ಘಟನೆ ಇದು. ಅತ್ಯಾಧುನಿಕ ತಂತ್ರಜ್ಞಾನ್‌ ಈ ವಿಮಾನವನ್ನು 2011ರಲ್ಲಿ ಸೇವೆಗೆ ಸೇರಿಸಲಾಗಿತ್ತು. ಬೋಯಿಂಗ್‌ ಕಂಪೊನಿಯ ಸಿಇಒ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದು, ತನಿಖೆಗಾಗಿ ತಂಡವನ್ನು ರವಾನಿಸುವುದಾಗಿ ಹೇಳಿದ್ದಾರೆ.
  8. ಬ್ರಿಟಷ್‌ ಪ್ರಧಾನಮಂತ್ರಿ ಕೀರ್‌ ಸ್ಟಾರ್ಮರ್‌ ಘಟನೆಗೆ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದು, ಸಮನ್ವಯಕ್ಕಾಗಿ ವಿದೇಶಾಂಗ ಸಚಿವರನ್ನು ನೇಮಿಸಿದ್ದಾರೆ.
  9. ಮೃತರ ಕುಟುಂಬಗಳಿಗೆ ಏರ್‌ ಇಂಡಿಯಾದ ಮಾತೃ ಸಂಸ್ಥೆಯಾದ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಟಾಟಾ ಗ್ರೂಪ್​​ನ ಅಧ್ಯಕ್ಷ ಎನ್. ಚಂದ್ರಶೇಖರನ್​​​ “ಈ ದುರಂತ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಮತ್ತು ಗಾಯಗೊಂಡವರೊಂದಿಗೆ ಇವೆ” ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top