ಹೊಸದಿಲ್ಲಿಯ ಫ್ರೆಂಡ್ಶಿಪ್ ಫೋರಂ ನೀಡುವ ಪ್ರತಿಷ್ಠಿತ ‘ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.
ಸಹಕಾರ, ಬ್ಯಾಂಕಿಂಗ್ ಮತ್ತು ಸಮಾಜ ಸೇವೆಯಲ್ಲಿ ಅವರ ಅನುಪಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಡಾ. ರಾಜೇಂದ್ರ ಕುಮಾರ್ ಅವರು ಕಳೆದ 31 ವರ್ಷಗಳಿಂದ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಬ್ಯಾಂಕನ್ನು ರಾಷ್ಟ್ರೀಯ ಮಟ್ಟದ ಬ್ಯಾಂಕ್ಗಳಿಗೆ ಸಮಾನವಾಗಿ ಉನ್ನತೀಕರಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ಸಮರ್ಥವಾಗಿ ತಲುಪಿಸಿದ್ದಾರೆ. ಅವರ ನಾಯಕತ್ವದಲ್ಲಿ ಬ್ಯಾಂಕ್ ಕಳೆದ 18 ವರ್ಷಗಳಿಂದ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಿಂದ `ಅತ್ಯುತ್ತಮ ಕೇಂದ್ರ ಸಹಕಾರಿ ಬ್ಯಾಂಕ್’ ಪ್ರಶಸ್ತಿ ಮತ್ತು ನಬಾರ್ಡ್ ಪ್ರಶಸ್ತಿಯನ್ನು ಸತತವಾಗಿ ಪಡೆದಿದೆ.
ಡಾ. ರಾಜೇಂದ್ರ ಕುಮಾರ್ ಅವರು ನವೋದಯ ಸ್ವಸಹಾಯ ಸಂಘಗಳ ಹರಿಕಾರರಾಗಿ ಮಹಿಳಾ ಸಶಕ್ತಿಕರಣಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಈ ಸಂಘಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಚೈತನ್ಯ ತುಂಬಿ, ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ.
ಡಾ. ರಾಜೇಂದ್ರ ಕುಮಾರ್ ಅವರಿಗೆ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳಾದ ಕರ್ನಾಟಕ ಸರ್ಕಾರದಿಂದ ‘ಸಹಕಾರ ರತ್ನ’ ಪ್ರಶಸ್ತಿ. ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್’, ‘ವಿಶ್ವ ಬಂಧುಶ್ರೀ’, ‘ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ’, ‘ಮಹಾತ್ಮ ಗಾಂಧಿ ಸಮ್ಮಾನ್’, ‘ಬೆಸ್ಟ್ ಚೇರ್ಮೆನ್ ನ್ಯಾಶನಲ್ ಅವಾರ್ಡ್ ಮತ್ತು ‘ನ್ಯಾಶನಲ್ ಎಕ್ಸಲೆನ್ಸ್ ಅವಾರ್ಡ್ ಔಟ್ ಸ್ಟಾಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ.
























