ಬೆಂಗಳೂರು: IPL ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಗೂಬೆ ಕೂರಿಸಿ ಹರಕೆಯ ಕುರಿ ಮಾಡಲು ಹೊರಟಿರುವ ಕೊಲೆಗಡುಕ ಕಾಂಗ್ರೆಸ್ ಸರಕಾರ 11 ಅಮಾಯಕ ಜನರ ಸಾವಿನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಸರಕಾರದ ವಿರುದ್ಧ ಆರ್. ಅಶೋಕ್ ಕಿಡಿಕಾರಿದ್ದಾರೆ.
ತಮ್ಮ “ಎಕ್ಸ್” ಖಾತೆಯಲ್ಲಿ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, “ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಮೊಮ್ಮಗನಿಗೆ ಕ್ರಿಕೆಟ್ ಆಟಗಾರರ ಜತೆ ಫೋಟೋಗ್ರಾಫ್, ಆಟೋಗ್ರಾಫ್ ತೆಗೆಸಿಕೊಡುವ ಭರದಲ್ಲಿ ಜನಸಾಮಾನ್ಯರ ಮನೆ ಮಕ್ಕಳನ್ನು ಕೊಂದು ಬಿಟ್ಟರಲ್ಲ? ನಿಮಗೆ ಆತ್ಮಸಾಕ್ಷಿ ಇದೆಯಾ?” ಎಂದು ಹರಿತವಾಗಿ ಪ್ರಶ್ನಿಸಿದ್ದಾರೆ.
ನಿಮ್ಮ ಮೊಮ್ಮಗನಿಗೆ ವೇದಿಕೆಯ ಮೇಲೆ ಕುರ್ಚಿ, ಜನಸಾಮಾನ್ಯರಿಗೆ ಬೀದಿಯಲ್ಲಿ ಕಾಲ್ತುಳಿತ. ಸಮಾಜವಾದ, ಸಾಮಾಜಿಕ ನ್ಯಾಯ ಎಂದು ಭಾಷಣ ಬಿಗಿದು ಆ ಪದಗಳಿಗೆ, ಸಿದ್ದಾಂತಗಳಿಗೆ ಅಪಮಾನ ಮಾಡಬೇಡಿ. “ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಂದು, ಚಿನ್ನಸ್ವಾಮಿ ಸ್ಟೇಡಿಯಂ ನಿಂದು’ ಎಂದು IPL ವಿಜಯೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಆಗಿರುವ ಈ ಹಂಚಿಕೆ ಒಪ್ಪಂದವೇ ಕಾಲ್ತುಳಿತ ಅನಾಹುತಕ್ಕೆ ಕಾರಣ ಎಂದ ಆರ್. ಅಶೋಕ್ ಹೇಳಿದರು.
ಘಟನೆಯಲ್ಲಿ ಬೆಂಗಳೂರು ಕಮಿಷನರ್ ಬಿ.ದಯಾನಂದ ಅವರನ್ನು ಬಲಿಪಶು ಮಾಡಲಾಗಿದೆ. ಜನ ಹಾದಿ ಬೀದಿಯಲ್ಲಿ ನಿಮ್ಮ ಸರಕಾರಕ್ಕೆ ಶಾಪ ಹಾಕುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಈಗ ಸ್ವತಃ ನಿಮ್ಮ ಕಾಂಗ್ರೆಸ್ ಮಂತ್ರಿಗಳು, ಶಾಸಕರೇ ಛೀಮಾರಿ ಹಾಕುತ್ತಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.