ಅಲ್ಪ ಪರಿಹಾರ ನೀಡಿದ್ದಕ್ಕೆ ಟೀಕೆ ವ್ಯಕ್ತವಾದ ಬಳಿಕ ಹೆಚ್ಚಳ ಮಾಡಿದ ಸರ್ಕಾರ
ಬೆಂಗಳೂರು: ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಗಳಿಗೆ ಬರೀ 10 ಲ.ರೂ. ಪರಿಹಾರ ಘೋಷಿಸಿದ್ದಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದ ಸರ್ಕಾರ ಇದೀಗ ಪರಿಹಾರ ಮೊತ್ತವನ್ನು 25 ಲ.ರೂ.ಗೆ ಏರಿಕೆ ಮಾಡಿದೆ. ಕಾಲ್ತುಳಿತದಿಂದ ಸಾವನ್ನಪ್ಪಿದ 11 ಮಂದಿಯ ಕುಟುಂಬಗಳ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರೂ.ಗೆ ಹೆಚ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಮೃತರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ಪರಿಹಾರ ಘೋಷಿಸಿತ್ತು. ಅಲ್ಲದೇ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಭರಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.
ಇದರೊಂದಿಗೆ ಮಡಿದವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಆಡಳಿತ ಮಂಡಳಿ ತಲಾ 10 ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಐಪಿಎಲ್ನಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಮಾಡಲು ಹೋಗಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಸರ್ಕಾರದ ತಪ್ಪಿನಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳೀತ ಸಂಭವಿಸಿ 11 ಮಂದಿ ಸಾವಿಗೀಡಾಗಿದ್ದಾರೆ. ಲಕ್ಷಗಟ್ಟಲೆ ಜನ ಸೇರುವುದು ಗೊತ್ತಿದ್ದರೂ ಸರ್ಕಾರ ಅವಸರದಿಂದ ವಿಜಯೋತ್ಸವ ಆಚರಿಸಲು ಮುಂದಾದ ಪರಿಣಾಮ ಕಾಲ್ತುಳಿತ ಸಂಭವಿಸಿದೆ, ಇದಕ್ಕಾಗಿ ಈಗಾಗಲೇ ಪೊಲೀಸರನ್ನು ಹೊಣೆ ಮಾಡಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.