ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕಿತ್ತು ಹಾಕಿದ ಸಿದ್ದರಾಮಯ್ಯ
ಬೆಂಗಳೂರು: ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಆರ್ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಯ ಬಂಧನ ಆಗುತ್ತಿದ್ದಂತೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜ್ ಅವರನ್ನು ಬಿಟ್ಟು ಕಳಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು ಎಂಬ ವಿಚಾರ ತಿಳಿದು ಬಂದಿದೆ. ಇದೇ ಕಾರಣಕ್ಕೆ ಗೋವಿಂದರಾಜ್ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಸಿದ್ದರಾಮಯ್ಯ ತೆಗೆದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಬೆಳಗ್ಗಿನ ಜಾವ ಆರ್ಸಿಬಿಯ ನಿಖಿಲ್ ಸೋಸಲೆ ಬಂಧನ ಆಗುತ್ತಿದ್ದಂತೆ ಬಿಟ್ಟು ಕಳುಹಿಸುವಂತೆ ಗೋವಿಂದರಾಜ್ ಕರೆ ಮಾಡಿ ಒತ್ತಡ ಹೇರಿದ್ದರು. ಈ ವಿಚಾರವನ್ನು ಸಿದ್ದರಾಮಯ್ಯ ವಿಧಾನಸೌಧಕ್ಕೆ ಬರುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಗೋವಿಂದರಾಜ್ ಅವರ ಮೇಲೆ ಸಿಎಂ ಗರಂ ಆಗಿ ಸ್ಥಾನದಿಂದ ಬಿಡುಗಡೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಲ್ತುಳಿತದ ಘಟನೆ ಬಳಿಕ ಕೆಲವು ಸಚಿವರು ಗೋವಿಂದರಾಜ್ ರಾಜೀನಾಮೆಗೆ ಒತ್ತಾಯಿಸಿದ್ದರು. ಆದರೆ ರಾಜೀನಾಮೆ ಪಡೆಯುವ ಯಾವ ಲೆಕ್ಕಾಚಾರವೂ ಇರಲಿಲ್ಲ ಎನ್ನಲಾಗಿದ್ದು, ಸ್ವತಃ ತಾವೇ ಬಂಧನಕ್ಕೆ ಸೂಚಿಸಿದ್ದ ವ್ಯಕ್ತಿಯ ಬಿಡುಗಡೆಗೆ ಕರೆ ಮಾಡಿ ಒತ್ತಡ ಮಾಡಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಆದೇಶ ಸಿದ್ಧವಾಗುದ್ದಂತೆ ಗೋವಿಂದರಾಜ್ಗೆ ಸಿಎಂ ಕಚೇರಿ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರನ್ನು ಜೂನ್ 1, 2023ರಿಂದ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.
ನಿನ್ನೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಕಾಲ್ತುಳಿತ ಘಟನೆಗೆ ಸಂಬಂಧಪಟ್ಟು ಗೋವಿಂದರಾಜ್ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದರು. ಇದರಿಂದ ತೀವ್ರ ಮುಜುಗರಕ್ಕೀಡಾದ ಸಿದ್ದರಾಮಯ್ಯ, ಗೋವಿಂದರಾಜು ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ.