ಪುತ್ತೂರು ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ವಿಜ್ಞಾನ ವಿಭಾಗದ ಶಿಕ್ಷಕಿ ಸಿಂಧು .ವಿ.ಕೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪರಿಸರದ ಮಹತ್ವವನ್ನು ತಿಳಿಸಿದರು. ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿ ಹಾಗೂ ಜಾಗತಿಕ ತಾಪಮಾನ ಏರುವುದಕ್ಕೆ ಇರುವ ಅನೇಕ ಕಾರಣಗಳನ್ನು ತಿಳಿಸಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸುವುದಕ್ಕೆ ನಮ್ಮ ಮನೆ ಹಾಗೂ ಶಾಲೆಯಿಂದ ಆರಂಭಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪುತ್ತೂರಿನ ಬೆಳ್ಳಿಪಾಡಿ ಗ್ರಾಮದ ಮಳುವೇಲು ಮನೆತನದ ಪದ್ಮನಾಭ ಗೌಡ ರವರು ಮೊನ್ನೆ ನಡೆದ ಆಪರೇಷನ್ ಸಿಂಧೂರದಲ್ಲಿ ಭಾರತದ ಯೋಧನಾಗಿ ಪಾಲ್ಗೊಂಡಿದ್ದರು. ಅವರು ಹುಟ್ಟೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಶಾಲಾ ವತಿಯಿಂದ ಆರತಿ ಎತ್ತಿ, ಹಣೆಗೆ ಸಿಂಧೂರವಿಟ್ಟು ,ಮೈಸೂರು ಪೇಟವನ್ನು ತೊಡಿಸಿ ಸಪತ್ನಿಕರಾಗಿ ಗೌರವಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯರ ಯೋಧರ ಸಾಹಸಗಾಥೆಯನ್ನು ವಿವರಿಸಿ ಭಾರತದ ಗಡಿ ರಕ್ಷಣೆಯಲ್ಲಿ ನಮ್ಮ ಯೋಧರ ಧೈರ್ಯ ಸಾಹಸವನ್ನು ಕೊಂಡಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟರಮಣ ಗೌಡ ವಹಿಸಿ ಮಾತನಾಡಿ, ಪರಿಸರ ಹಾಳಾದರೆ ನಾವು ಹಾಳಾದಂತೆ ಹಾಗಾಗಿ ನಮ್ಮ ಪರಿಸರವನ್ನು ನಾವು ಬಹಳ ಎಚ್ಚರಿಕೆಯಿಂದ ಕಾಪಾಡಬೇಕು ಎನ್ನುತ್ತಾ, ಭಾರತೀಯ ಯೋಧರ ಬಗ್ಗೆ ಅಭಿನಂದನೆಯ ನುಡಿಗಳನ್ನು ಆಡಿದರು.

ಶಾಲೆಯ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯರವರು ಸ್ವಾಗತಿಸಿ, ಉಪಾಧ್ಯಕ್ಷ ಉಮೇಶ್ ಮಳುವೇಲು ಸನ್ಮಾನಿತರ ಪರಿಚಯವನ್ನು ಮಾಡಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಎ ವಿ ನಾರಾಯಣ , ನಿರ್ದೇಶಕ ಗಂಗಾಧರ ಗೌಡ, ಸ್ಥಳೀಯ ನಗರಸಭಾ ಸದಸ್ಯೆ ಗೌರಿ ಬನ್ನೂರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯ ಹೆಗಡೆ, ಪ್ರಾಂಶುಪಾಲ ಅಮರನಾಥ್ ಪಟ್ಟೆ ಉಪಸ್ಥಿತರಿದ್ದರು. ಕುಮಾರಿ ಜೋತ್ಸ್ನ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕ ವೃಂದ ಸಹಕರಿಸಿದರು. ಶಿಕ್ಷಕಿ ರೀಮ ಲೋಬೋ ವಂದಿಸಿದರು. ಹಿತಶ್ರೀ ಕಾರ್ಯಕ್ರಮ ನಿರೂಪಿಸಿದರು. ಅತಿಥಿಯಾಗಿದ್ದ ಪದ್ಮನಾಭ ಮಲುವೇಳು ಅವರು ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು.
























