ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆಗೆ ಮುಂದಾದ ಹೈಕೋರ್ಟ್
ಬೆಂಗಳೂರು : ಆರ್ಸಿಬಿಯ ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಬಗ್ಗೆ ಇನ್ನೂ ಒಂದೇ ಒಂದು ಎಫ್ಐಆರ್ ದಾಖಲಾಗದಿರುವುದು ನಾನಾ ರೀತಿಯ ಅನುಮಾನ ಹುಟ್ಟಲು ಕಾರಣವಾಗಿದೆ. ಇಡೀ ಘಟನೆಯನ್ನು ಯಾರದ್ದಾದರೂ ತಲೆಗೆ ಕಟ್ಟಿ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ ಎಂಬ ದಟ್ಟ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಾಪಿಸಿದೆ.
ಇಷ್ಟೊಂದು ದೊಡ್ಡ ಮಟ್ಟದ ದುರಂತ ಸಂಭವಿಸಿದ್ದರೂ ಈವರೆಗೆ ಒಂದೇ ಒಂದು ಎಫ್ಐಆರ್ ಕೂಡ ದಾಖಲಾಗಿಲ್ಲ. ಘಟನೆಯನ್ನು ಕೇವಲ ‘ಅಸಹಜ ಸಾವು (UDR)’ ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹನ್ನೊಂದು ಯುಡಿಆರ್ ದಾಖಲಾಗಿವೆ. ದುರ್ಘಟನೆಯಿಂದ ಆಗಿರುವ ಸಾವು ಹಾಗೂ ಇತರ ಯಾವುದೇ ವಿಚಾರಕ್ಕೆ ಕೇಸ್ ದಾಖಲು ಮಾಡಿಲ್ಲ.
ಅಲ್ಲದೆ ನಿನ್ನೆ ರಾತ್ರಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಕಾಲ್ತುಳಿತಕ್ಕೆ ಕ್ರಿಕೆಟ್ ಅಸೋಸಿಯೇಶನ್ ಕಾರಣ ಎಂಬ ದಾಟಿಯಲ್ಲಿ ಮಾತನಾಡಿ ತನ್ನ ಮೇಲಿನ ಅಪವಾದಗಳಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ ಎಂಬ ಭಾವನೆ ಉಂಟಾಗಿದೆ. ತಾನೇ ಮಾಡಿದ ಎಡವಟ್ಟುಗಳಿಂದ ಘೋರ ದುರಂತ ಸಂಭವಿಸಿದ್ದರೂ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.
ಕಾರ್ಯಕ್ರಮ ಆಯೋಜಿಸಿದವರ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಕೇಸ್ ದಾಖಲು ಮಾಡಲು ಅವಕಾಶವಿತ್ತು. ಕಾರ್ಯಕ್ರಮ ಆಯೋಜಿಸಿದ್ದ ಕೆಎಸ್ಸಿಎ ಮತ್ತು ಕಾರ್ಯಕ್ರಮದ ಇವೆಂಟ್ ಮ್ಯಾನೇಜ್ಮೆಂಟ್ ಜವಾಬ್ದಾರಿ ವಹಿಸಿದ್ದ ಡಿಎನ್ಎ ಕಂಪನಿ ವಿರುದ್ಧ ಕೇಸ್ ದಾಖಲು ಮಾಡಿ ತನಿಖೆ ನಡೆಸಬಹುದಾಗಿತ್ತು. ಆದರೆ, ಈಗ ಹೊಣೆಗಾರಿಕೆ ಹೊರಲು ಯಾರೂ ತಯಾರಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿದ್ದಾರೆ ಎಂಬುದು ಗೊತ್ತಾಗಿದೆ. ಪೊಲೀಸರ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಹಾಗಾದರೆ ಹನ್ನೊಂದು ಜೀವಗಳಿಗೆ ಬೆಲೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿ ಪಡೆದು ನಂತರ ಅದನ್ನು ಕ್ಲೋಸ್ ಮಾಡಲಿದ್ದಾರೆ.
ಮ್ಯಾಜಿಸ್ಟ್ರೇಟ್ ತನಿಖೆಯ ಬಗ್ಗೆಯೂ ಅನುಮಾನ
ದುರ್ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರ ಆದೇಶಿಸಿದೆ. ಈ ಪ್ರಕ್ರಿಯೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಕೆ ಮಾಡುವುದಷ್ಟೇ ಮ್ಯಾಜಿಸ್ಟ್ರೇಟರ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿ ಅದಕ್ಕಿಂತ ಹೆಚ್ಚಿನ ತನಿಖೆ, ವಿಚಾರಣೆಗೆ ಆಸ್ಪದ ಇರುವುದಿಲ್ಲ. ಹೆಚ್ಚೆಂದರೆ, ಅಧಿಕಾರಿಗಳ ಅಥವಾ ಆಯೋಜಕರ ವಿರುದ್ದ ಮ್ಯಾಜಿಸ್ಟ್ರೇಟರು ವರದಿ ಸಲ್ಲಿಸಬಹುದು. ಅಂಥ ಸಂದರ್ಭದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಬಹದು ಅಥವಾ ಇಲಾಖಾ ತನಿಖೆಗೆ ಅದೇಶಿಸಬಹುದು. ಇದಕ್ಕಿಂತ ಹೆಚ್ಚಿನದ್ದು ಸಾಧ್ಯವಿಲ್ಲ, ಸರ್ಕಾರಕ್ಕೂ ಬೇಕಾದದ್ದು ಇಷ್ಟೇ.
ಪೊಲೀಸರ ಈ ನಡೆಯಿಂದಾಗಿ ಸಂಪೂರ್ಣ ಘಟನೆಗೆ ಯಾರು ಹೊಣೆ ಎಂಬ ಬಗ್ಗೆ ತನಿಖೆಯೇ ನಡೆಯುವುದಿಲ್ಲ. ಜನರು ಅವರಾಗಿಯೇ ಬಂದು ಸಿಕ್ಕಿ ಹಾಕಿಕೊಂಡು ಕಾಲ್ತುಳಿತವಾಗಿ ಸಾವನಪ್ಪಿದ್ದಾರೆ. ಇದಕ್ಕೆ ಯಾರೂ ಹೊಣೆ ಅಲ್ಲ ಎಂಬ ನಿರ್ಧಾರಕ್ಕೆ ಭಾಗಶಃ ಬಂದಂತಾಗಿದೆ. ಬಿಎನ್ಎಸ್ ಕಾಯ್ದೆಯ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಉಂಟಾದ ಸಾವು) ಅಡಿ ಪ್ರಕರಣ ದಾಖಲಿಸಲು ಅವಕಾಶ ಇದ್ದರೂ ಹಾಗೆ ಮಾಡದೇ ಇರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ
ಈ ನಡುವೆ ಆರ್ಸಿಬಿ ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಸಂಭವಿಸಿದ ಕಾಲ್ತುಳಿತ ಹಾಗೂ 11 ಜನರ ಸಾವಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಘಟನೆ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದ್ದು, ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಪಡಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಪೀಠದಲ್ಲಿ ಘಟನೆ ಕುರಿತು ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ. ಅರ್ಜಿ ವಿಚಾರಣೆ ನಡೆಯಲಿದೆ. ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ ಬಗ್ಗೆ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.