ಮಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಬಲಿಯಾಗಿರುವುದು ಘೋರ ದುರಂತವಾಗಿದ್ದು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಇದಕ್ಕೆ ಕಾರಣವಾಗಿದೆ ಎಂದು ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಸರ್ಕಾರದ ಭದ್ರತಾ ನಿರ್ಲಕ್ಷೃಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಯಾವುದೇ ಪೂರ್ವ ಸಿದ್ದತೆ ಇಲ್ಲದೆ ಕೇವಲ ಪ್ರಚಾರದ ಉದ್ದೇಶದಿಂದ ಕಾರ್ಯಕ್ರಮ ಏರ್ಪಡಿಸಿದ್ದು, ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ. ರಾಜ್ಯದ ಗೃಹ ಸಚಿವರು ಸಹಿತ ಪೂರ್ತಿ ಇಲಾಖೆ ವಿಫಲವಾಗಿದೆ ಎಂದು ಸ್ವತಃ ಆಡಳಿತ ಪಕ್ಷದ ನಾಯಕರೇ ಆರೋಪಿಸುತ್ತಿದ್ದಾರೆ. ಈ ಘಟನೆಯಲ್ಲಿ ಮತ್ತೆ ಇಲಾಖೆಯ ವೈಫಲ್ಯ ಬಹಿರಂಗವಾಗಿದೆ.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲೇ ಇಂತಹ ದುರ್ಘಟನೆ ನಡೆದಿರುವುದು ನಾಚಿಕೆಗೇಡು ಎಂದು ಕಟೀಲ್ ಹೇಳಿದ್ದಾರೆ.