ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ತನಕ ಭವ್ಯ ವಿಕ್ಟರಿ ಪರೇಡ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್ ಆದ ಬಳಿಕ ಕರ್ನಾಟಕದಲ್ಲಿ ಸಂಭ್ರಮ ಮನೆಮಾಡಿದೆ. 18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ ಆರ್ಸಿಬಿಯ ಅದ್ದೂರಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ.
ಅಧಿಕೃತವಾಗಿ ಆರ್ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್ಸಿಬಿ ತಿಳಿಸಿದೆ. ಫೈನಲ್ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸಲಾಗುವುದು ಎಂದು ತಿಳಿಸಿದ್ದರು.
ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 16 ಪಂದ್ಯಗಳನ್ನಾಡಿದೆ. ಈ 16 ಮ್ಯಾಚ್ಗಳಲ್ಲಿ ಸೋತಿರುವುದು ಕೇವಲ 4 ಪಂದ್ಯಗಳನ್ನು ಮಾತ್ರ. ಅದರಲ್ಲಿ 9 ಪಂದ್ಯಗಳನ್ನು ಅವೇ ಮೈದಾನದಲ್ಲಿ ಗೆದ್ದುಕೊಂಡಿದೆ. ಅಂದರೆ ಬೆಂಗಳೂರಿನ ಹೊರಗೆ ಆರ್ಸಿಬಿ ಸತತ 9 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ.
ಐಪಿಎಲ್ ಸೀಸನ್ವೊಂದರಲ್ಲಿ ತವರಿನ ಹೊರಗೆ ಸತತ 9 ಪಂದ್ಯಗಳನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದ ಮತ್ತೊಂದು ತಂಡವಿಲ್ಲ. ಅಂದರೆ ಆರ್ಸಿಬಿ ತಂಡವು ಐಪಿಎಲ್ನಲ್ಲಿ ಈವರೆಗೆ ಯಾರಿಂದಲೂ ಕೂಡ ಸಾಧ್ಯವಾಗದ ಗೆಲುವಿನ ನಾಗಾಲೋಟದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎದುರಾಳಿ ತಂಡಗಳ ತವರು ಮೈದಾನದಲ್ಲಿ 7 ಜಯ ಹಾಗೂ ತವರಿನ ಹೊರಗೆ ನಡೆದ ಪ್ಲೇಆಫ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಹೊಮ್ಮಿದೆ. ಅದು ಕೂಡ 17 ವರ್ಷಗಳ ಕಾಯುವಿಕೆಯ ಬಳಿಕ ಎಂಬುದು ವಿಶೇಷ.