18 ವರ್ಷಗಳ ಬಳಿಕ ಕಪ್ ಗೆದ್ದು ಬೀಗಿದ ಆರ್ಸಿಬಿ
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೧೮ ವರ್ಷಗಳ ಸತತ ನಿರೀಕ್ಷೆಯ ಬಳಿಕ ಕೊನೆಗೂ ಟ್ರೋಫಿ ಎತ್ತಿ ಹಿಡಿದಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಕಾದಾಟದಲ್ಲಿ ಆರ್ಸಿಬಿ 6 ರನ್ಗಳ ಜಯ ಸಾಧಿಸಿ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶ್ರೇಯಸ್ ಪಡೆಗೆ ಗೆಲ್ಲಲು ಆರ್ಸಿಬಿ 191 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ ರಜತ್ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕೇವಲ 155 ರನ್ಗಳಿಗೆ ಸರ್ವ ಪತನ ಕಂಡು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿ ಪಡೆದುಕೊಂಡಿತು.
ಬಹುಕಾಲದಿಂದ ಆರ್ಸಿಬಿ ಐಪಿಎಲ್ ಚಾಂಪಿಯನ್ ಆಗಬೇಕೆಂದು ಬಯಸುತ್ತಿದ್ದ ಕನ್ನಡಿಗರ ಕನಸು ಕೊನೆಗೂ ನಿನ್ನೆ ನನಸಾಗಿದ್ದು, ಆರ್ಸಿಬಿ ಗೆಲ್ಲುತ್ತಿದ್ದಂತೆ ಕನ್ನಡಿಗರ ಸಂಭ್ರಮ ಮುಗಿಲು ಮುಟ್ಟಿತು. ರಾತ್ರಿಯೇ ಜನ ಬೀದಿಗಿಳಿದು ಪಟಾಕಿ ಸುಟ್ಟು ಸಂಭ್ರಮಿಸಿದರು. ಆರ್ಸಿಬಿ ಗೆಲುವು ಕರ್ನಾಟಕದಲ್ಲಿ ಹಬ್ಬದ ವಾತಾವರಣ ಉಂಟುಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಆರ್ಸಿಬಿ ತಂಡವನ್ನು ಅಭಿನಂದಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕೈಲ್ ಜೇಮಿಸನ್ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡುವ ಮೂಲಕ ಪಂಜಾಬ್ನ ನಿರ್ಧಾರವನ್ನು ಸರಿಯೆಂದು ಸಾಬೀತುಪಡಿಸಿದರು. ಸಾಲ್ಟ್ 16 ರನ್ ಗಳಿಸಿ ಔಟಾದರು, ವಿರಾಟ್ ಕೊಹ್ಲಿ ತಂಡಕ್ಕಾಗಿ 43 ರನ್ ಗಳಿಸಿದರೆ, ಮಾಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 24 ರನ್ ಗಳಿಸಿದರು, ಇದರಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಜಿತೇಶ್ ಶರ್ಮಾ (24) ಹಾಗೂ ರೊಮಾರಿಯೊ ಶೆಫರ್ಡ್ (17) ಅಂತಿಮ ಹಂತದಲ್ಲಿ ತಂಡಕ್ಕೆ ಆಸರೆಯಾದರು. ಕೈಲ್ ಜೇಮಿಸನ್ ಮತ್ತು ಅರ್ಶ್ದೀಪ್ ಸಿಂಗ್ ತಲಾ 3-3 ವಿಕೆಟ್ಗಳನ್ನು ಪಡೆದರು.
ಬಳಿಕ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಸ್ಫೋಟಕ ಆರಂಭ ಪಡೆದುಕೊಂಡಿತು. ಆರ್ಸಿಬಿ ಎದುರಾಳಿಯ ವಿಕೆಟ್ ಕೀಳಲು ಮೊದಲಿಗೆ ಪರದಾಡಿತು. ಆದರೆ, 5ನೇ ಓವರ್ನಲ್ಲಿ ಹ್ಯಾಜಲ್ವುಡ್ ತಂಡಕ್ಕೆ ಮೊದಲ ಬ್ರೇಕ್ ತಂದುಕೊಟ್ಟರು. 24 ರನ್ ಗಳಿಸಿದ ಪ್ರಿಯಾಂಶ್ ಔಟಾದರು. ಬಳಿಕ ಪ್ರಭ್ ಸಿಮ್ರಾನ್ (26) ಹಾಗೂ ಜೋಶ್ ಇಂಗ್ಲಿಸ್ (39) ತಂಡಕ್ಕೆ ನೆರವಾಗಿ ಗೆಲುವಿನತ್ತ ಕೊಂಡೊಯ್ದರು. ಆದರೆ ಇವರ ಆಟಕ್ಕೆ ಕ್ರುನಾಲ್ ಬ್ರೇಕ್ ಹಾಕಿದರು.
ಎರಡನೇ ಎಲಿಮಿನೇಟರ್ನಲ್ಲಿ ಹೀರೋ ಆಗಿದ್ದ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿ ಕೇವಲ 1 ರನ್ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟರ್ಗಳ ಪೈಕಿ ಕೊನೆಯ ಹಂತದವರೆಗೆ ಶಶಾಂಕ್ ಸಿಂಗ್ (ಅಜೇಯ 61) ಹೋರಾಡಿದ್ದು ಬಿಟ್ಟರೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೆಯ 6 ಎಸೆತಗಳಲ್ಲಿ ಪಂಜಾಬ್ ಗೆಲುವಿಗೆ 29 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

18 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ
18 ವರ್ಷಗಳ ಬಳಿಕ ಆರ್ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ರಜತ್ ಪಾಟೀದಾರ್ ಪಡೆ ಟ್ರೋಫಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮಿಗಿಲು ಮುಟ್ಟಿತು. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಪಟಾಕಿ ಸದ್ದುಗಳು ಮೊಳಗಿದವು. ಆರ್ಸಿಬಿ.. ಆರ್ಸಿಬಿ… ಎಂಬ ಜಯಘೋಷ ಕಿವಿಗಡಚಿಕ್ಕವಂತಿತ್ತು. ಈ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ.
ಬೆಂಗಳೂರಿನ ಓರಾಯನ್ ಆವರಣದಲ್ಲಿ ಎಲ್ಇಡಿ ಸ್ಕ್ರೀನ್ನಲ್ಲಿ ಆರ್ಸಿಬಿ ವರ್ಸಸ್ ಪಂಜಾಬ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮ್ಯಾಚ್ ಗೆಲ್ಲುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಚರ್ಚ್ ಸ್ಟ್ರೀಟ್ನಲ್ಲಿ ಜನಸಾಗರವೇ ನೆರೆದಿತ್ತು. ಲೈವ್ ಸ್ಕ್ರೀನ್ನಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದರು. ಕೊಹ್ಲಿ ಅಳುವುದನ್ನು ಕಂಡು ಯುವತಿಯೊಬ್ಬಳು ಕಣ್ಣೀರಿಟ್ಟಳು. ನವರಂಗ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಗೋವಿಂದರಾಜನಗರ ಗ್ರೌಂಡ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳಲ್ಲಿ ಜೋಶ್ ಇತ್ತು. ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಯಿತು. ಆನೇಕಲ್ ಪಟ್ಟಣದ ತಿಲಕ್ ವೃತ್ತದಲ್ಲಿ ಆರ್ಸಿಬಿ ಗೆಳೆಯರ ಬಳಗ ಸಂಭ್ರಮಾಚರಣೆ ಮಾಡಿತು. ಆರ್ಸಿಬಿ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಜ್ಕುಮಾರ್ ರಸ್ತೆ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ವಿಜಯನಗರ, ಎಂಜಿ ರಸ್ತೆ ಮೊದಲಾದ ಕಡೆ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದರು. ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಿಗಟ್ಟಿ ಸಂಭ್ರಮಿಸಿದರು.