ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮಾಹಿತಿ ರವಾನಿಸುತ್ತಿದ್ದ ಗೂಢಚಾರ
ನವದೆಹಲಿ: ಇನ್ನೋರ್ವ ಪಾಕಿಸ್ತಾನಿ ಗೂಢಚಾರ ಸೆರೆಯಾಗಿದ್ದಾನೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಯುತ್ತಿರುವಾಗ ಪಾಕಿಸ್ತಾನದ ಐಎಸ್ಐ ಜತೆ ಸೇನೆಯ ಚಲನವಲನದ ಹಂಚಿಕೊಂಡಿದ್ದ ಗೂಢಚಾರನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಐಎಸ್ಐ ಜೊತೆ ಬಲವಾದ ಸಂಪರ್ಕ ಹೊಂದಿರುವ ಆರೋಪದ ಮೇಲೆ ಗೂಢಚಾರ ಗಗನ್ದೀಪ್ ಸಿಂಗ್ನನ್ನು ಬಂಧಿಸಲಾಗಿದೆ. ಆತ ಖಲಿಸ್ತಾನಿ ಉಗ್ರ ಗೋಪಾಲ್ ಸಿಂಗ್ ಚಾವ್ಲಾನೊಂದಿಗೂ ಸಂಬಂಧ ಹೊಂದಿದ್ದಾನೆ. ಆರೋಪಿಯು ಆಪರೇಷನ್ ಸಿಂದೂರ ಸೇರಿದಂತೆ ಗಡಿಯಾಚೆಗಿನ ಏಜೆಂಟರೊಂದಿಗೆ ಸೇನಾ ಚಲನವಲನಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಗನ್ದೀಪ್ ಸಿಂಗ್ ಭದ್ರತಾ ಪಡೆಗಳ ನಿಯೋಜನೆ ಮತ್ತು ಕಾರ್ಯತಂತ್ರದ ಸ್ಥಳಗಳ ವಿವರಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದು, ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಗನ್ದೀಪ್ ಸಿಂಗ್ ಕಳೆದ ಐದು ವರ್ಷಗಳಿಂದ ಪಾಕಿಸ್ತಾನ ಮೂಲದ ಖಲಿಸ್ತಾನಿ ಭಯೋತ್ಪಾದಕ ಗೋಪಾಲ್ ಸಿಂಗ್ ಚಾವ್ಲಾ ಜೊತೆ ಸಂಪರ್ಕದಲ್ಲಿದ್ದ.
ಆತನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಆತ ತನ್ನ ಪಾಕಿಸ್ತಾನಿ ಏಜೆಂಟ್ಗಳೊಂದಿಗೆ ಹಂಚಿಕೊಂಡ ಗುಪ್ತಚರ ಮಾಹಿತಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಬಹಿರಂಗಪಡಿಸಿದೆ ಮತ್ತು ಆತನಿಗೆ 20ಕ್ಕೂ ಹೆಚ್ಚು ಐಎಸ್ಐ ಸಂಪರ್ಕಗಳಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸಮಯದಲ್ಲಿ ಪ್ರಸ್ತುತ ಪಾಕಿಸ್ತಾನದಲ್ಲಿರುವ ಖಲಿಸ್ಥಾನಿ ಭಯೋತ್ಪಾದಕ ಗೋಪಾಲ್ ಚಾವ್ಲಾ, ಐಎಸ್ಐ ಸಹಯೋಗದೊಂದಿಗೆ ಭಾರತದಲ್ಲಿ ಬೇಹುಗಾರಿಕೆ ದಂಧೆಯನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
6qjujf