ಸರ್ಕಾರದ ನಡೆಗೆ ತೀವ್ರ ಟೀಕೆ
ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಜನರಿಗೆ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡದಿದ್ದರೂ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿರುವ ಕಾಂಗ್ರೆಸ್ನ ಕಾರ್ಯಕರ್ತರಿಗೆ ಕ್ಲಪ್ತವಾಗಿ 7.65 ಕೋಟಿ ರೂ. ಹಣ ಬಿಡುಗಡೆ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆ ಆಗುತ್ತಿಲ್ಲ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದ್ದು, ಟಿಕೆಟ್ ದರ ಏರಿಕೆ ಮಾಡಿ ಬರೆ ಎಳೆದಿದೆ. ಯುವನಿಧಿ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡುತ್ತಿಲ್ಲ. ಅನ್ನಭಾಗ್ಯದ ಲೋಪದೋಷಗಳ ಕುರಿತು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಗೃಹಜ್ಯೋತಿಯ ಸರಾಸರಿಯನ್ನು 2ನೇ ವರ್ಷವಾದರೂ ಪರಿಷ್ಕರಣೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳು ಲಾಭ ಪಡೆಯದಿದ್ದರೂ, ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿರುವ ಕಾಂಗ್ರೆಸ್ನ ಕಾರ್ಯಕರ್ತರಿಗೆ ಭರ್ಜರಿ ಹಣ ಬಿಡುಗಡೆ ಮಾಡಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರ ಗೌರವಧನ ಮತ್ತು ಸದಸ್ಯರಿಗೆ ಹಣ ಬಿಡುಗಡೆಗೆ ಆದೇಶ ನೀಡಲಾಗಿದೆ. ಏಪ್ರಿಲ್ನಿಂದ ಆಗಸ್ಟ್ವರೆಗಿನ ಸಭಾ ಭತ್ಯೆ ಬಿಡುಗಡೆಗೆ ಸೂಚನೆ ನೀಡಲಾಗಿದ್ದು, 3 ತಿಂಗಳ ಅಡ್ವಾನ್ಸ್ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಗ್ಯಾರಂಟಿ ಸಮಿತಿ ಹೆಸರಲ್ಲಿ ಮುಂಗಡ ವೇತನ ನೀಡುವ ಈ ದರಿದ್ರ ಸರ್ಕಾರ ಡೇಟಾ ಆಪರೇಟರ್ಗಳಿಗೆ 4 ತಿಂಗಳುಗಳಿಂದ ವೇತನ ನೀಡದೆ ಸತಾಯಿಸುತ್ತಿದೆ. ವೇತನ ನೀಡದ ಕಾರಣ ಆಸ್ಪತ್ರೆಗಳಲ್ಲಿ ಡೇಟಾ ಆಪರೇಟರ್ಗಳ ಸೇವೆ ಲಭ್ಯವಾಗುತ್ತಿಲ್ಲ, ಇದರಿಂದ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ರಾಜ್ಯದ ಸರ್ಕಾರಿ/ಅರೆ ಸರ್ಕಾರಿ/ ಗುತ್ತಿಗೆ ಆಧಾರಿತ ನೌಕರರನ್ನೂ ಮೀರಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಂಗಡ ವೇತನ ಪಡೆಯುತ್ತಿರುವುದು ಈ ರಾಜ್ಯದ ದುರಂತವೇ ಸರಿ ಎಂದು ಕಿಡಿಕಾರಿದೆ.