ಪುತ್ತೂರು: ಜಿಡೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಸೋಮವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಜಕ್ಕಳ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿದ್ದ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗಾದಾಗ ಅದು ಜೀವನ ಪರ್ಯಂತ ಫಲವನ್ನು ನೀಡುತ್ತದೆ. ಹಿರಿಯರಿಗೆ ತೃಪ್ತಿ ನೀಡುವ ರೀತಿಯಲ್ಲಿ ಎಳೆಯರು ಕಾರ್ಯನಿರ್ವಹಿಸಬೇಕು. ಬುದ್ಧಿವಂತಿಕೆಯಿಂದ ಕಾರ್ಯೋನ್ಮುಖರಾಗುವ ಮೂಲಕ ಯಶಸ್ಸನ್ನು ಪಡೆಯಬೇಕು. ಇದು ವಿದ್ಯಾರ್ಥಿ ಜೀವನಕ್ಕೆ ಮುಕುಟಪ್ರಾಯವಾದ ಸಂಗತಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ವಾರ್ಷಿಕ ವರದಿ ವಾಚಿಸಿ, ಮಾತನಾಡಿ, ಕಾಲೇಜಿನ ಅಭಿವೃದ್ಧಿಯ ಯೋಜನೆಗಳನ್ನು ಮುಂದಿಟ್ಟು ದಾನಿಗಳನ್ನು ಸ್ಮರಿಸಿಕೊಂಡರು.
ಕಾಲೇಜು ಅಭಿವೃದ್ಧಿ ಸಮಿತಿಯ ನಿಯೋಜಿತ ಕಾರ್ಯಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಎನ್. ದುಗ್ಗಪ್ಪ ಶುಭ ಹಾರೈಸಿದರು.
ಪ್ರಥಮ ಬಿ.ಕಾಮ್. ವಿದ್ಯಾರ್ಥಿನಿ ಸಂಸ್ಕೃತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಬಿ.ಕಾಮ್. ವಿದ್ಯಾರ್ಥಿನಿ ಸೌಮ್ಯಾ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹರಿಣಾಕ್ಷಿ ಎಂ.ಡಿ. ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ. ನಾಗರಾಜ್ ಮತ್ತು ವಾಣಿಜ್ಯ ವಿಭಾಗದ ಪ್ರೊ. ರಕ್ಷಿತಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕ ಪ್ರೊ. ಹರೀಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
rxbbeq