ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಉಡುಪಿ: ಸಾಕುನಾಯಿಯನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು–ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕುನಾಯಿಯನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ಮಾನವೀಯ ಕೃತ್ಯದ ವಿಡಿಯೋ ಮೇ 25ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋವನ್ನು ಪೊಲೀಸರು ಗಮನಿಸಿ ಪರಿಶೀಲಿಸಿದಾಗ ವ್ಯಕ್ತಿಯ ಬೈಂದೂರು ಪಡುವರಿ ಗ್ರಾಮದ ಸುಬ್ರಹ್ಮಣ್ಯ ಎಂಬುದಾಗಿ ತಿಳಿದು ಬಂದಿದೆ. ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕವಾಗಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಬಳಿಕ ಆರೋಪಿ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.