ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿದ ಕುಟುಂಬ

ಮೈಸೂರು: ಮಗಳು ಅನ್ಯ ಜಾತಿಯವನನ್ನು ಮದುವೆಯಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕಾಲುಗಳಿಗೆ ಹಗ್ಗ ಕಟ್ಟಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶನಿವಾರ ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಮೃತ ದುರ್ದೈವಿಗಳು. ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮಹದೇವಸ್ವಾಮಿ ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರು ಬಿಟ್ಟು ಎಚ್‌.ಡಿ.ಕೋಟೆಯಲ್ಲಿ ವಾಸವಿದ್ದರು. ಅಲ್ಲಿಯೂ ಸ್ವಂತ ಮನೆ ಖರೀದಿ ಮಾಡಿದ್ದರು. ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು.



















































 
 

ಅರ್ಪಿತಾ ಮೈಸೂರಿನಲ್ಲಿ ಅನ್ಯಜಾತಿಯ ಹುಡುಗನ ಜೊತೆ ಪ್ರೀತಿಸಿ ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಳು. ತಂದೆ ಮಹದೇವಸ್ವಾಮಿ ಸಮುದಾಯದ ಜನರಿಗೆ ಹೆದರಿ ಮದುವೆ ನಿರಾಕರಿಸಿದ್ದರು. ತಂದೆ, ತಾಯಿ ನಿರ್ಧಾರವನ್ನು ಧಿಕ್ಕರಿಸಿ ಅರ್ಪಿತಾ ಮನೆ ಬಿಟ್ಟು ಹೋಗಿ ಮೂರು ದಿನಗಳ ಹಿಂದೆ ಮದುವೆಯಾಗಿದ್ದಳು. ಮಗಳ ಈ ನಿರ್ಧಾರದಿಂದ ಮರ್ಯಾದೆ ಹೋಯಿತು ಎಂದು ಭಾವಿಸಿ ಮಹದೇವಸ್ವಾಮಿ, ಪತ್ನಿ ಹಾಗೂ ಕಿರಿಯ ಮಗಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಳೆಯಲ್ಲೇ ಶನಿವಾರ ರಾತ್ರಿ ಮೃತರ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಮಗ, ಸೊಸೆ ಹಾಗೂ ಮೊಮ್ಮಗಳ ಸಾವಿನಿಂದ ದಿಕ್ಕೇ ತೋಚದಂತೆ ಕುಳಿತ ವೃದ್ಧ ತಂದೆ ಹಾಗೂ ಮಗನ ಸಾವಿನ ದಿಗ್ಭ್ರಮೆಯಲ್ಲಿ ತಾಯಿ ಕಣ್ಣೀರ ಕೋಡಿ ಹರಿಸಿದ್ದಾರೆ. ಮಹದೇವಸ್ವಾಮಿ ಅವರ ಜಮೀನಲ್ಲೇ ಒಂದೇ ಚಿತೆಯಲ್ಲಿ ಸಾಲಾಗಿ ಮಲಗಿಸಿ ತಂದೆ, ತಾಯಿ ಹಾಗೂ ಮಗಳ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ನೆರವೇರಿಸಿದರು. ಮನೆ ತೊರೆದಿದ್ದ ಹಿರಿಯ ಮಗಳು ಅರ್ಪಿತಾ, ತಂದೆ, ತಾಯಿ ಹಾಗೂ ಸಹೋದರಿಯ ಅಂತಿಮ ದರ್ಶನಕ್ಕೂ ಬರಲಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top