ಪಾಕಿಸ್ಥಾನ ಇರುವ ಐಸಿಸಿಯ ಯಾವುದೇ ಟೂರ್ನಿಯಲ್ಲಿ ಆಡದಿರಲು ನಿರ್ಧಾರ
ಮುಂಬಯಿ: ಭಾರತ-ಪಾಕಿಸ್ಥಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಏಷ್ಯಾಕಪ್ ಟೂರ್ನಿಯಿಂದ ಹಿಂದೆ ಸರಿಯಲು ಬಿಸಿಸಿಐ ನಿರ್ಧರಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಎಲ್ಲ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ.
ಶ್ರೀಲಂಕಾದಲ್ಲಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಹಾಗೆಯೇ ಈ ವರ್ಷಾಂತ್ಯದಲ್ಲಿ ಪುರುಷರ ಏಷ್ಯಾಕಪ್ ಟೂರ್ನಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿತ್ತು. ಈ ಟೂರ್ನಿಯಿಂದಲೂ ಭಾರತ ಹೊರಗುಳಿಯುವುದಾಗಿ ಬಿಸಿಸಿಐ ತಿಳಿಸಿದೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಮುಂಬರುವ ಟಿ20 ವಿಶ್ವಕಪ್ ಅನ್ನು ಕೇಂದ್ರೀಕರಿಸಿ ಟಿ20 ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಆದರೀಗ ಆತಿಥ್ಯದ ಹಕ್ಕನ್ನು ಹೊಂದಿರುವ ಭಾರತವೇ ಟೂರ್ನಿಯಿಂದ ಹಿಂದೆ ಸರಿದಿದೆ. ಹೀಗಾಗಿ ಟೂರ್ನಿ ನಡೆಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಏಷ್ಯಾಕಪ್ ಟೂರ್ನಿಗೆ ಅತಿಹೆಚ್ಚು ಪ್ರಾಯೋಜಕತ್ವ ಸಿಗುವುದು ಭಾರತದಿಂದ. ಟೀಮ್ ಇಂಡಿಯಾವೆ ಟೂರ್ನಿಯಿಂದ ಹೊರಗುಳಿದರೆ, ಪ್ರಾಯೋಜಕರ ಕೊರತೆ ಎದುರಾಗಿ ಆದಾಯದ ಮೇಲೂ ಭಾರಿ ಹೊಡೆತ ಬೀಳಲಿದೆ. ಹೀಗಾಗಿ ಈ ಬಾರಿ ಟೂರ್ನಿ ನಡೆಯುವುದೇ ಅನುಮಾನ ಎನ್ನಲಾಗಿದೆ.
ಪಾಕ್ ಬೆಂಬಲಿತ ಉಗ್ರರು ಪಹಲ್ಗಾಮ್ನಲ್ಲಿ 26 ಭಾರತೀಯರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ತಿರುಗೇಟು ನೀಡಿತ್ತು. ಅದಾಗ್ಯೂ ಪಾಕ್ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಪಾಕ್ ಜೊತೆಗಿನ ಎಲ್ಲ ರೀತಿಯ ಕ್ರಿಕೆಟ್ ಸಂಬಂಧಕ್ಕೆ ಇತಿಶ್ರೀ ಹಾಡಲು ಬಿಸಿಸಿಐ ಮುಂದಾಗಿದೆ.
ಪಾಕಿಸ್ಥಾನದ ಸಚಿವರು ಮುಖ್ಯಸ್ಥರಾಗಿರುವ ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತದ ತಂಡ ಆಡಲು ಸಾಧ್ಯವಿಲ್ಲ. ಹೀಗಾಗಿ ಮುಂಬರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ನಿಂದ ಹಿಂದೆ ಸರಿಯುವ ಬಗ್ಗೆ ನಾವು ಈಗಾಗಲೇ ಎಸಿಸಿಗೆ ಮೌಖಿಕವಾಗಿ ತಿಳಿಸಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷದ ನಡೆಯಲಿರುವ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಳ್ಳುವುದಿಲ್ಲ. ಈ ಮೂಲಕ ಪಾಕಿಸ್ಥಾನದ ಕ್ರಿಕೆಟ್ ಆದಾಯಕ್ಕೂ ಹೊಡೆತ ನೀಡಲು ಭಾರತ ಮುಂದಾಗಿದೆ. 2023ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲೌಟ್ ಮಾಡಿ, ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತ್ತು.