ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಮರು ತೆಗೆದುಕೊಳ್ಳುವ ಕಾರ್ಯ ಶುಕ್ರವಾರದಿಂದ ಮುಂದುವರಿದಿದೆ.
ಶುಕ್ರವಾರ ಪುತ್ತೂರಿನ ನೆಲ್ಲಿಕಟ್ಟೆ ಬಳಿ ಬೇರೆಯವರಲ್ಲಿ ಬಾಡಿಗೆಗೆ ಇದ್ದ ಜಾಗದ ಕಂಪೌಂಡ್ ನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸ್ವಾಧೀನ ಪಡೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನೆಲ್ಲಿಕಟ್ಟೆ ಪರಿಸರದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು ಒಂದೂಕಾಲು ಎಕ್ರೆ ಜಾಗವಿದೆ. ಇದೀಗ 30-40 ವರ್ಷಗಳಿಂದ ರುಕ್ಕಾಂ ಆದಂ ಹಾಜಿ ಅವರ ಬಾಡಿಗೆಗಿದ್ದ 123/5 ಸರ್ವೆ ನಂ.ನಲ್ಲಿನ 8 ಸೆಂಟ್ಸ್ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನು ಜೆಸಿಬಿ ಮೂಲಕ ಜಾಗದ ಕಂಪೌಂಡ್ ತೆರವು, ಸಮತಟ್ಟು ಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಶಾಸಕರ ಸೂಚನೆಯಂತೆ ನೆಲ್ಲಿಕಟ್ಟೆಯಲ್ಲಿ ಎಲ್ಲಾ ಜಾಗವನ್ನು ಶೀಘ್ರ ದೇವಸ್ಥಾನಕ್ಕೆ ಸ್ವಾಧೀನಪಡಿಸಲಾಗುವುದು. ಜಾಗದವರ ಜತೆ ಮಾತುಕತೆ ಮಾಡಿದ್ದೇವೆ. ಕಾಲಾವಕಾಶ ಕೇಳಿದ್ದಾರೆ. ಅವರ ಮನವೊಲಿಸಿ ಮುಂದಿನ ಸ್ವಾಧೀನ ಕೆಲಸ ಕಾರ್ಯ ಆರಂಭಿಸಿಸಲಾಗುವುದು ಎಂದು ತಿಳಿಸಿದರು.
ದೇವಸ್ಥಾನದ ಸಮಿತಿ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ವ್ಯವಸ್ಥಾಪಕ ಹರೀಶ್ ಉಪಸ್ಥಿತರಿದ್ದರು.