ತನಿಖೆಯನ್ನು ಎನ್ಐಎಗೊಪ್ಪಿಸಿ ಇನ್ನಷ್ಟು ಕೊಲೆಗಳನ್ನು ತಡೆಯಲು ಒತ್ತಾಯ
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಸಂಚಿನಲ್ಲಿ ನಿಷೇಧಿತ ಉಗ್ರ ಸಂಘಟನೆ ಕೆ.ಎಫ್.ಡಿ ಹಾಗೂ ಪಿ.ಎಫ್.ಐ ಕೈವಾಡ ಇರುವುದು ಬಯಲಾಗಿದೆ. ಎರಡು ದಿನದ ಹಿಂದೆ ಬಂಧಿತನಾಗಿರುವ ನೌಶಾದ್ ಕೆ.ಎಫ್.ಡಿ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಹಿಂದೂ ಸಂಘಟನೆಯ ಪ್ರಮುಖ ಕಾರ್ಯಕರ್ತ ಸುಖಾನಂದ ಶೆಟ್ಟಿ ಅವರನ್ನು ಹತ್ಯೆ ಮಾಡಿರುವುದು ಇದೇ ಕೆ.ಎಫ್.ಡಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನೌಶಾದ್ ಮತ್ತು ಅವನ ಸಹಚರರು. ಇಷ್ಟು ಮಾತ್ರವಲ್ಲದೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮತ್ತೆ ಇಬ್ಬರು ಪ್ರಮುಖರ ಮನೆ ಹಾಗೂ ಅವರ ಮೇಲೆ ದಾಳಿ ನಡೆಸಿದ್ದು ಇದೇ ನೌಶಾದ್.
ಈ ಜಿಹಾದಿ ಇನ್ನಷ್ಟು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಮುನ್ನ ಸುಹಾಸ್ ಶೆಟ್ಟಿ ಕೊಲೆಯ ಪ್ರಕರಣವನ್ನು ಮುಖ್ಯಮಂತ್ರಿ ಕಾಂಗ್ರೆಸ್ ಸರಕಾರ ಎನ್ಐಎಗೆ ವಹಿಸಬೇಕು. ಈ ಮೂಲಕ ರಾಜ್ಯದಲ್ಲಿ ನಡೆಯುವ ಹತ್ಯೆಗಳನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ನೌಶಾದ್ಗೆ ನಿಷೇಧಿತ ಪಿ.ಎಫ್.ಐ ಸಂಘಟನೆ ಬೆಂಗಾವಲಾಗಿ ನಿಂತಿದ್ದು, ಅಪರಾಧ ಪ್ರಕರಣಗಳಲ್ಲಿ ಸಂಘಟನೆಯ ಪಾತ್ರವೂ ಇದೆ. ಈ ಸಂಘಟನೆಗಳನ್ನು ನಿಷೇಧದ ಬಳಿಕವೂ ಅಕ್ರಮ ದೇಶದ್ರೋಹಿ ಚಟುವಟಿಕೆಯಲ್ಲಿದ್ದಂತೆ ಕಂಡು ಬರುತ್ತಿದ್ದು, ಹಿಂದೂ ಕಾರ್ಯಕರ್ತರ ಮೇಲೆ ಇನ್ನಷ್ಟು ದಾಳಿಗಳಾಗಿ ಹತ್ಯೆ ಮಾಡುವ ಮುನ್ನ ಆರೋಪಿಗಳ ಇಡೀ ತಂಡವನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಕೇಂದ್ರದ ಎನ್.ಐ.ಎ ಸೂಕ್ತವಾಗಿದೆ ಎಂದಿದ್ದಾರೆ.