ವಿಜಯಪುರ : ತೆರೆದ ಬಾವಿಗೆ ಮೂರು ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ಬಾವಿಗೆ ಬಿದ್ದು ಸಾವನ್ನಪ್ಪಿರುವ ಮಗು ಮೂರು ವರ್ಷದ ಹರ್ಷಿತ್ ಪಾಟೀಲ್ ಎನ್ನಲಾಗಿದೆ. ಶುಕ್ರವಾರ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಹೀಗೆ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿತ್ತು. ಮಗು ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ತಕ್ಷಣ ಕುಟುಂಬಸ್ಥರು ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಇಂದು ಸ್ಥಳೀಯರು ಬಾವಿಯಲ್ಲಿ ಇಳಿದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.
ಕುಟುಂಬಸ್ಥರು ಮಗುವನ್ನು ತೆರೆದ ಬಾವಿಯ ಅನುಪಾನಲ್ಲಿ ಆಡಲು ಬಿಟ್ಟಾಗ ಅನಾಹುತ ನಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.