ಪುತ್ತೂರು: ಉದ್ಯಮಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಎಡಕ್ಕಾನ ರಾಜಾರಾಮ ಭಟ್ ದುಬೈಯಲ್ಲಿ ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ.
ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್ ರು ಎಡಕ್ಕಾನ ಟ್ರೇಡರ್ಸ್ ಎಂಬ ವ್ಯಾಪಾರ ಮಳಿಗೆಯನ್ನು ಹೊಂದಿದ್ದರಲ್ಲದೆ, ದುಬೈ ಮಸ್ಮತ್ ಗಳಲ್ಲಿ ಖರ್ಜೂರದ ವ್ಯಾಪಾರ ಕೂಡ ಹೊಂದಿದ್ದರು. ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ಹೋಗಿದ್ದ ಅವರು ಅಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಬಿ.ಜೆ.ಪಿ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ, ಎಡಕ್ಕಾನ ರಾಜಾರಾಮರು ಪ್ರಧಾನ ಪಾತ್ರ ವಹಿಸಿದ್ದರು. ಚುನಾವಣೆ ಕಳೆದು ಒಂದು ವರ್ಷದ ಬಳಿಕ ಪುತ್ತಿಲರೊಂದಿಗೆ ಭಿನ್ನಾಭಿಪ್ರಾಯ ಬಂದು ಅವರು ಪುತ್ತಿಲ ಪರಿವಾರ ತೊರೆದಿದ್ದರಲ್ಲದೆ, ಪುತ್ತಿಲರ ವಿರುದ್ಧ ಕೇಸು ಆಗುವುದರಲ್ಲೂ ಪಾತ್ರ ವಹಿಸಿದ್ದರು.