ಅರ್ಹರನ್ನು ಸನ್ಮಾನಿಸಿದರೆ ಸನ್ಮಾನಿಸಿದವರಿಗೊಂದು ಹೆಮ್ಮೆ : – ಡಾ. ಪ್ರಭಾಕರ ಭಟ್  ಕಲ್ಲಡ್ಕ | ನಿರಂಜನ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ಹಿರಿಯರಾದರೂ ಸಕ್ರಿಯರಾಗಿರುವ ಅನೇಕರ ಉತ್ಸಾಹ ನಮಗೆ ಪ್ರೇರಣೆ. ಸದಾಶಿವ ಭಟ್ ಪಳ್ಳು ಅವರಂತಹ ಸಾಧಕರು ಹತ್ತು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಾರೆ ಎಂದಾದರೆ ಅವರ ಸಂಪರ್ಕಕ್ಕೆ ಬಂದವರೂ ಒಳ್ಳೆಯ ಭಾಷಾ ಜ್ಞಾನವನ್ನು ಹೊಂದಬಹುದು. ಅರ್ಹ ವ್ಯಕ್ತಿಗಳಿಗೆ ಸನ್ಮಾನ ಮಾಡಿದರೆ ಸನ್ಮಾನಿಸಿದವರಿಗೂ ಅದು ಹೆಮ್ಮೆಯ ಕ್ಷಣ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ನುಡಿದರು.

ಅವರು ಮಂಗಳವಾರ ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖ್ಯಾತ ಬರಹಗಾರ ಹಾಗೂ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಅವರಿಗೆ ನಿರಂಜನ ಪ್ರಶಸ್ತಿ ಹಾಗೂ ಬಹುಭಾಷಾ ವಿದ್ವಾಂಸ ಡಾ. ಡಿ ಸದಾಶಿವ ಭಟ್ ಪಳ್ಳು ಅವರಿಗೆ ಶಂಕರ ಪ್ರಶಸ್ತಿಯನ್ನು ನೀಡಲಾಯಿತು.

















































 
 

ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಬು ಕೃಷ್ಣಮೂರ್ತಿ ಅವರು, ಸದಭಿರುಚಿಯ ಕ್ಷೇತ್ರಗಳಲ್ಲಿ ಸೈದ್ಧಾಂತಿಕವಾಗಿ ಹಾಗೂ ಇತರ ವಿಷಯಗಳಲ್ಲಿ ಭೇದಗಳಿದ್ದರೂ ಒಳ್ಳೆಯ ಗೆಳೆತನವನ್ನು ಬೆಳೆಸಿಕೊಳ್ಳಬೇಕು.  ಕೃತಿಕಾರನು ಹೊಸತೊಂದು ಕೃತಿ ರಚಿಸುವ ಸಿದ್ಧತೆಯಲ್ಲಿರುವುದು ಹಾಗೂ ಓದುಗರು ಕೃತಿಯೊಂದನ್ನು ಓದಲು ಕಾತರಿಸುವ ಸನ್ನಿವೇಶ ಪ್ರೇರಣಾತ್ಮಕವಾದುದು ಎಂದರು.

ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ ಸದಾಶಿವ ಭಟ್ ಪಳ್ಳು ಅವರು ” ಅಕ್ಷರ ಕಲಿಸಿ ಪ್ರೋತ್ಸಾಹಿಸಿದ ಗುರುವನ್ನು ಎಂದೂ ಮರೆಯಕೂಡದು. ಭಾಷೆಯೊಂದರಲ್ಲಿರುವ ಎಲ್ಲಾ ವ್ಯಾಕರಣಾಂಶಗಳನ್ನು ಸರಿಯಾಗಿ ಅರಿತು ಒಳ್ಳೆಯ ರೀತಿಯಲ್ಲಿ ಭಾಷೆಯನ್ನು ಬಳಸಿ ಬೆಳೆಸಬೇಕು ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಎಂ ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು.

ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್ ಎಂ.ಜಿ ಸ್ವಾಗತಿಸಿ, ಉಪಪ್ರಾಂಶುಪಾಲ ಶಿವಪ್ರಸಾದ್ ಕೆ.ಎಸ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top