ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಹಾಗೂ ಸಂಘದ ವಾರ್ಷಿಕ ಮಹಾಸಭೆ ಮೇ 1 ಗುರುವಾರ ಬೆಳಿಗ್ಗೆ 9.30 ಕ್ಕೆ ಬಪ್ಪಳಿಗೆಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ ಶೈಕ್ಷಣಿಕವಾಗಿ ಆರು ಮಂದಿ ಸಾಧಕರಿಗೆ ಅಭಿನಂದಿಸಲಾಗುವುದು. ದೆಹಲಿ ಗಣರಾಜ್ಯೋತ್ಸವದಲ್ಲಿ ಪ್ರಧಾನಮಂತ್ರಿ ರ್ಯಾಲಿಯಲ್ಲಿ, ದೆಹಲಿ ಕರ್ತವ್ಯಪಥ ರಾಜ್ಯೋತ್ಸವ ಪಥಸಂಚಲನದಲ್ಲಿ, ಗಣರಾಜ್ಯೋತ್ಸವ ಕರ್ತವ್ಯಪಥದಲ್ಲಿ, ಸಾಂಸ್ಕೃತಿಕ ವಿಭಾಗದಲ್ಲಿ ಪಾಲ್ಗೊಂಡ ಡಾ.ಸಾಜಿದಾಬಾನು, ಮಾ.ಸುಜಿತ್, ಲಹರಿ, ಶುಭದ ಆರ್. ಪ್ರಕಾಶ್, ಹಾರ್ದಿಕ್ ಹೆಚ್. ಶೆಟ್ಟಿ ಹಾಗೂ ದಿನೇಶ್ ಆಚಾರ್ಯ ಅವರನ್ನು ಅಭಿನಂದಿಸಲಾಗುವುದು. ಅಲ್ಲದೆ ಸಂಘದ ಶಾಶ್ವತ ನಿಧಿಗೆ 25 ಸಾವಿರ ನೀಡಿದವರಿಗೆ ಗೌರವಾರ್ಪಣೆ, 80 ವರ್ಷ ಮೇಲ್ಪಟ್ಟ 11 ಮಂದಿ ಹಿರಿಯ ಸದಸ್ಯರಿಗೆ, 85 ವರ್ಷ ಮೇಲ್ಪಟ್ಟ 11 ಮಂದಿ ಹಿರಿಯ ಸದಸ್ಯರಿಗೆ, 80 ವರ್ಷ ಪೂರೈಸಿದ 18 ಮಂದಿ ಹಿರಿಯ ಸದಸ್ಯರಿಗೆ ಹಾಗೂ 75 ವರ್ಷ ಪೂರ್ಣಗೊಳಿಸಿದ 31 ಹಿರಿಯ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಸಮಾರಂಭವನ್ನು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಉದ್ಘಾಟಿಸಲಿದ್ದು, ತಾಲೂಕು ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಬಿ.ಸೂರಪ್ಪ ಗೌಡ, ಉಪಾಧ್ಯಕ್ಷೆ ಪ್ರೊ.ಎಂ.ವತ್ಸಲಾರಾಜ್ಞಿ, ಸಂಘಟನಾ ಕಾರ್ಯದರ್ಶಿ ಬಿ.ಜಗನ್ನಾಥ ರೈ ಉಪಸ್ಥಿತರಿದ್ದರು.
























