ಮೋದಿ, ಅಮಿತ್ ಶಾ ಕರ್ನಾಟಕ ಸರಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪ
ಬೆಂಗಳೂರು: ರಾಜ್ಯದಲ್ಲಿರುವ ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ. ಒಗ್ಗಟ್ಟಾಗಿ ಇರದೆ ಹೋದರೆ ಸರ್ಕಾರ ಉರುಳಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತುಮ್ಮೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ನೀವು ಹುಷಾರಾಗಿರಬೇಕು. ಮೋದಿ, ಅಮಿತ್ ಶಾ ನಿಮ್ಮ ಸರ್ಕಾರ ಬೀಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ತಾಪವಿದ್ದರೂ ಒಗ್ಗಟ್ಟಾಗಿರಬೇಕು ಎಂದು ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ಗೆ ಕಿವಿಮಾತು ಹೇಳಿದರು.
ಮೋದಿ ಸರ್ಕಾರ ಈ ಭಾಗಕ್ಕೆ ಯಾವುದೇ ಕೆಲಸ ಮಾಡಿಲ್ಲ. ನಾನು 1 ವರ್ಷದಲ್ಲಿ ಮಾಡಿದ ಕೆಲಸ, ಅವರು 10 ವರ್ಷವಾದರೂ ಮಾಡುವುದಿಲ್ಲ. ಅವರು ಒಂದೇ ಒಂದು ರೈಲು ಸಹ ಇಲ್ಲಿಯವರೆಗೆ ಬಿಟ್ಟಿಲ್ಲ. ಕಲಬುರಗಿ ಏರ್ಪೋರ್ಟ್ಗೆ ಸರ್ಕಾರದಿಂದಲೇ ಜಮೀನು ಹಾಗೂ ಹಣ ಕೊಟ್ಟಿದ್ದೇವೆ. ಆದರೆ ನಮಗೆ ಒಂದು ವಿಮಾನ ಸಹ ಬರಲ್ಲ. ಅವರ ಕಿವಿ ಹಿಂಡಿ ಒಂದೆರಡು ಫ್ಲೈಟ್ ಇಲ್ಲಿಗೆ ಕೊಡಬೇಕಾಗಿದೆ ಎಂದು ಕಿಡಿಕಾರಿದರು.
ವಿರೋಧ ಪಕ್ಷದವರು ಮಾತಾಡಿದರೆ ಇ.ಡಿ ಮೂಲಕ ಹಣಿಯುತ್ತಾರೆ. 1937ರಲ್ಲಿ ನೆಹರೂ ಜನರ ಹೋರಾಟಕ್ಕಾಗಿ 3 ಭಾಷೆಯಲ್ಲಿ ಪತ್ರಿಕೆ ಆರಂಭ ಮಾಡಿದ್ದರು. ಈಗ ಇ.ಡಿಯನ್ನು ಕೂರಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಚಾರ್ಜ್ಶೀಟ್ ಹಾಕಿಸಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಏನು ನೀವು ಅದಕ್ಕೆ ಹಣ ಕೊಟ್ಟಿದ್ರಾ? ಎಂದು ಪ್ರಶ್ನಿಸಿದರು.
ಇ.ಡಿ, ಐಟಿ ಬಿಟ್ಟರೆ ಕಾಂಗ್ರೆಸ್ ಬಗ್ಗುತ್ತದೆ ಎಂದು ಅಂದುಕೊಂಡಿದ್ದೀರಿ. ಆದರೆ ಕಾಂಗ್ರೆಸ್ ಯಾವತ್ತು ಬಗ್ಗೋದಿಲ್ಲ. ರಾಹುಲ್ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ. ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ಕೊಟ್ಟಿದೆ. ಮೋದಿಯವರೇ ನೀವೇನು ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.