ಪುತ್ತೂರು: 60 ರ ಸಂಭ್ರಮದಲ್ಲಿರುವ ಪುತ್ತೂರು ರೋಟರಿ ಕ್ಲಬ್ ವತಿಯಿಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಗತ್ತಿನಾದ್ಯಂತ ಹಲವು ಕ್ಲಬ್ ಗಳು, ಕೆಲವು ಲಕ್ಷ ಸದಸ್ಯರಿದ್ದಾರೆ. 34 ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಬೆಳೆದು ಬಂದ ಪುತ್ತೂರು ರೋಟರಿ ಕ್ಲಬ್ ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ ಎಂದ ಅವರು, 2024-25ನೇ ಸಾಲಿನಲ್ಲಿ ಹಮ್ಮಿಕೊಂಡ ಹಾಗೂ ಮುಂದೆ ಹಮ್ಮಿಕೊಳ್ಳುವ ಯೋಜನೆ ಕುರಿತು ಮಾಹಿತಿ ನೀಡಿದರು.
ರೋಟರಿ ಸಂಸ್ಥೆಯಿಂದ ಪ್ರತೀ ತಿಂಗಳು ಕೆಎಂಸಿ ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ, ಪುತ್ತೂರಿನ ಪ್ರಗತಿ, ಚೇತನಾ ಹಾಗೂ ನಝೀರ್ ಕ್ಲಿನಿಕ್ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ, ಡಯಾಬಿಟಿಸ್, ಅಸ್ತಮಾ, ಮಕ್ಕಳ ಆರೋಗ್ಯ ಶಿಬಿರ, ಎಲುಬು ಸಾಂಧ್ರತೆ, ಥೈರಾಯಿಡ್ ಮುಂತಾದ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ಯೋಜನೆಯ ಅಂಗವಾಗಿ ಈ ವರ್ಷ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ “ಮೆಮೋಗ್ರಾಪಿ ಸೆಂಟರ್’ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಅಲ್ಲದೆ ರೋಟರಿ ಕ್ಲಬ್ ಪುತ್ತೂರು ಪೂರ್ವದ ಸಹಕಾರದೊಂದಿಗೆ ವಿಶೇಷ ಚೇತನ ಮಕ್ಕಳಿಗೆ 6 ಲಕ್ಷ ರೂ. ವೆಚ್ಚದ ಪ್ಲೇ ಹೋಂ ನಿರ್ಮಾಣ ಮಾಡಿದ್ದು, ಇದರ ಲೋಕಾರ್ಪಣೆ ನಡೆಯಲಿದೆ. 40 ಸಾವಿರ ರೂ. ವೆಚ್ಚದ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳ್ಳಲಿದೆ. ಹೀಗೆ 2024-25ನೇ ಸಾಲಿನ ಅವಧಿಯಲ್ಲಿ ಸುಮಾರು 65 ಲಕ್ಷ ರೂ. ವೆಚ್ಚದ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ರೋಟರಿ ಕಾರ್ಯಕ್ರಮ ಕಾರ್ಯದರ್ಶಿ ಡಾಮೋದರ್ ಕೆ.ಎ., ಪೂರ್ವಾಧ್ಯಕ್ಷ ಜಯರಾಜ್ ಭಂಡಾರಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್, ಸದಸ್ಯರಾದ ಚಿದಾನಂದ ಬೈಲಾಡಿ, ಝೇವಿಯರ್ ಡಿ’ಸೋಜಾ ಉಪಸ್ಥಿತರಿದ್ದರು.