ಎಎಸ್ಐ ಸಹಿತ ಐವರು ಅಮಾನತು
ಬೆಂಗಳೂರು: ಜೂಜಾಡುವವರನ್ನು ಹಿಡಿದು ತಂದು ರುಬ್ಬಿ ಪಾಠ ಕಲಿಸಬೇಕಾದ ಪೊಲೀಸರು ತಾವೇ ಠಾಣೆಯಲ್ಲಿ ಯೂನಿಫಾರ್ಮ್ ಧರಿಸಿಕೊಂಡು ಜೂಜಾಡಿದರೆ ಹೇಗೆ? ಇಂಥ ಒಂದು ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಸಂಭವಿಸಿದೆ. ಜೂಜಾಡಿದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಎಸ್ಐ ಮಹಿಮೂದ್ ಮಿಯಾ, ಹೆಡ್ಕಾನ್ಸ್ಟೆಬಲ್ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಮತ್ತು ಕಾನ್ಸ್ಟೆಬಲ್ ನಾಗಭೂಷಣ್ ಅಮಾನತುಗೊಂಡವರು. ಈ ಪ್ರಕರಣ ಬೇಲಿಯೇ ಎದ್ದು ಹೊಲ ಮೇಯಿತು ಎಂಬ ಗಾದೆಗೆ ಉತ್ತಮ ಉದಾಹರಣೆಯಾಗಿದೆ.
ವಾಡಿ ಪೊಲೀಸ್ ಠಾಣೆಯ ಮೊದಲನೇ ಅಂತಸ್ತಿನಲ್ಲಿ ಖಾಕಿ ಬಟ್ಟೆಯಲ್ಲೇ ನಾಲ್ಕೈದು ಜನ ಪೊಲೀಸರು ಸೇರಿಕೊಂಡು ಇಸ್ಪೀಟ್ ಆಟ ಆಡುತ್ತಿದ್ದ ವೀಡಿಯೊ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಜಿಎಸ್ಪಿ ಅಡ್ಡೂರು ಶ್ರೀನಿವಾಸಲು ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣ ಸಂಬಂಧ ವಾಡಿ ಠಾಣೆ ಪಿಎಸ್ಐ ತಿರುಮಲೇಶ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.