ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ ಬೃಹತ್ ಡ್ರಗ್ಸ್ ಜಾಲದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ?
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿರುವ ರಾಜ್ಯದ ಅತಿದೊಡ್ಡ ಡ್ರಗ್ಸ್ ಜಾಲದ ಹಲವು ಮಾಹಿತಿಗಳು ಬೆಚ್ಚಿಬೀಳಿಸುವಂತಿದೆ. ದಾಖಲೆಯ 75 ಕೋಟಿ ರೂ. ಮೌಲ್ಯದ ಡ್ರಗ್ಸ್ ಜೊತೆ ಸಿಕ್ಕಿಬಿದ್ದಿರುವ ಇಬ್ಬರು ವಿದೇಶಿ ಮಹಿಳೆಯರು ಈ ಮೊದಲು ಒಂದು ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ 59 ಸಲ ಡ್ರಗ್ಸ್ ಸಾಗಿಸಿದ್ದರೂ ಸಿಕ್ಕಿಬೀಳದೆ ಪಾರಾಗಿದ್ದರು. ಆದರೆ ಅದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯೊಂದು ಕಾಡುತ್ತಿದೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಬಳಿಕ ಈಗ ಮಂಗಳೂರು ಪೊಲೀಸರು ಬಯಲಿಗೆಳೆದಿರುವ ಡ್ರಗ್ಸ್ ಜಾಲ ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ.
ಬಂಧಿತ ಇಬ್ಬರು ವಿದೇಶಿ ಮಹಿಳೆಯರು ಕಳೆದ ಒಂದು ವರ್ಷದಲ್ಲಿ ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಮುಂಬೈ ವಿಮಾನ ನಿಲ್ದಾಣ ಮೂಲಕ ಬರೋಬ್ಬರಿ 59 ಬಾರಿ ಡ್ರಗ್ಸ್ ಸಮೇತ ಬಂದಿದ್ದಾರೆ. ಆದರೂ ಮೂರು ವಿಮಾನ ನಿಲ್ದಾಣದಲ್ಲಿ ಇವರು ಸಿಕ್ಕಿಬೀಳಿಲ್ಲ ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ವಿಮಾನ ನಿಲ್ದಾಣದಲ್ಲಿ ಇವರಿಗೆ ಯಾರಾದರೂ ಸಹಾಯ ಮಾಡುತ್ತಿದ್ದರೆ? ಕಸ್ಟಮ್ಸ್ನವರ ಕಣ್ಣಿಗೆ ಮಣ್ಣೆರಚಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿವೆ.
ದೇಶದೆಲ್ಲೆಡೆ ಡ್ರಗ್ಸ್ ಸಾಗಾಟ ಮಾಡುವ ಈ ಇಬ್ಬರು ಮಹಿಳಾ ಡ್ರಗ್ ಪೆಡ್ಲರ್ಗಳು ದೆಹಲಿ ವಿಮಾನ ನಿಲ್ದಾಣದಿಂದ ದೇಶದ ಇತರೆಡೆ ವಿಮಾನದಲ್ಲೇ ಡ್ರಗ್ಸ್ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಮಂಗಳೂರು ಸಿಸಿಬಿ ಪೊಲೀಸರು ಮಾರ್ಚ್ 14ರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ರಾತ್ರಿ 12.30ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎರಡು ಟ್ರಾಲಿಗಳ ಮೂಲಕ ಹೊರ ಬಂದ ದಕ್ಷಿಣ ಆಫ್ರಿಕಾ ಪ್ರಜೆಗಳಾದ 31 ವರ್ಷದ ಬಂಬಾ ಫಾಂಟಾ ಹಾಗೂ 30 ವರ್ಷದ ಅಬಿಗಾಲ್ ಅಡೋನಿಸ್ ಪ್ರತ್ಯೇಕ ಎರಡು ಕಾರುಗಳ ಮೂಲಕ ಹೊರಡುತ್ತಾರೆ. ಇಬ್ಬರಲ್ಲೂ ಒಂದೊಂದು ಟ್ರಾಲಿ ಬ್ಯಾಗ್ ಇದ್ದು ವಿಮಾನ ನಿಲ್ದಾಣದಿಂದ ಇಲೆಕ್ಟ್ರಾನಿಕ್ ಸಿಟಿಯತ್ತ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರಲ್ಲಿದ್ದ ಎರಡು ಟ್ರಾಲಿ ಬ್ಯಾಗ್ನಲ್ಲಿ ಒಟ್ಟು 75 ಕೋಟಿ ಮೌಲ್ಯದ 37.878 ಕೆಜಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು ಎಲ್ಲವನ್ನ ವಶಪಡಿಸಿಕೊಂಡಿದ್ದಾರೆ.

ಈ ಮಹಿಳೆಯರು ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 59 ಬಾರಿ ವಿಮಾನದಲ್ಲೇ ಈ ಡ್ರಗ್ಸ್ ಸಾಗಾಟ ಮಾಡಿದ್ದಾರೆ. ದೆಹಲಿಯಿಂದ 37 ಬಾರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಗೂ ದೆಹಲಿಯಿಂದ 22 ಬಾರಿ ಮುಂಬೈ ವಿಮಾನ ನಿಲ್ದಾಣ ಡ್ರಗ್ಸ್ ಸಾಗಿಸಿದ್ದಾರೆ. ಪ್ರತಿಬಾರಿ ದೆಹಲಿಯಿಂದ ಲೇಟ್ ನೈಟ್ ಫ್ಲೈಟ್ಗಳನ್ನೇ ಬುಕ್ ಮಾಡಿಕೊಂಡು ಬರುತ್ತಿದ್ದ ಈ ಮಹಿಳೆಯರು ಅದ್ಯಾವ ರೀತಿ ತಪಾಸಣೆಗೆ ಒಳಗಾಗದೆ, ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬೀಳದೆವಿಮಾನ ನಿಲ್ದಾಣದಿಂದ ಹೊರ ಬಂದಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆ.
ವಿಮಾನ ನಿಲ್ದಾಣಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ತಪಾಸಣೆ ನಡೆಸಿ ಬಳಿಕ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿಯೇ ಪ್ರತಿ ಪ್ರಯಾಣಿಕರನ್ನು ಒಳಗೆ ಹಾಗೂ ಹೊರಗೆ ಬಿಡಲಾಗುತ್ತದೆ. ಎಲ್ಲವನ್ನೂ ಬಹಳ ಕಟ್ಟುನಿಟ್ಟಾಗಿ ತಪಾಸಣೆ ಮಾಡುವ ಭದ್ರತಾ ಸಿಬ್ಬಂದಿ ಈ ಡ್ರಗ್ ಪೆಡ್ಲರ್ಗಳನ್ನು ಇಷ್ಟೊಂದು ಬಾರಿ ಸಲೀಸಾಗಿ ಹೇಗೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಅನುಮಾನದ ಹುಟ್ಟಿಸಿದೆ.
ಮಂಗಳೂರು ಪೊಲೀಸರ ಈ ಬೃಹತ್ ಕಾರ್ಯಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಮುಖಂಡರು ಪ್ರಶಂಸೆ ವ್ಯಕ್ತವಾಗಿದೆ.