ಗದಗ: ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲಾ ರಂಗುರಂಗಿನ ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಗ್ರಾಮದ ಗುಂಡೇಶ್ವರ ಕೆರೆಯಲ್ಲಿ ದೇವೇಂದ್ರ ರಾಚನಗೌಡ (16) ಎಂದು ಪತ್ತೆ ಹಚ್ಚಲಾಗಿದೆ.
ದೇವೇಂದ್ರ ಬೆಳಗ್ಗೆಯಿಂದ ಸ್ನೇಹಿತರೊಂದಿಗೆ ಊರಲ್ಲಿ ಬಣ್ಣದ ಹೋಳಿ ಆಟವಾಡಿದ್ದಾನೆ. ನಂತರ ನಾಲ್ಕು ಜನ ಸ್ನೇಹಿತರು ಒಟ್ಟಾಗಿ ಕೆರೆಗೆ ಈಜಲು ಹೋಗಿದ್ದರು. ಮೂರು ಜನ ದಡದಲ್ಲಿ ಸ್ನಾನ ಮಾಡಿದ್ದು, ದೇವೇಂದ್ರ ಒಂದು ದಡದಿಂದ ಮತ್ತೊಂದು ದಡ ತಲುಪುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಈ ವೇಳೆಕೆರೆಯ ಮಧ್ಯಭಾಗದ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾನೆ. ಜೊತೆಗಿದ್ದ ಸ್ನೇಹಿತರ ಮಾಹಿತಿಯಂತೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಯಿಂದ ಬಾಲಕನಿಗಾಗಿ ಶೋಧ ಕಾರ್ಯನಡೆಸಿದರು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನ ಮೃತ ದೇಹ ಹೊರತೆಗೆದಿದ್ದಾರೆ. ಈ ಬಗ್ಗೆ ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.