ನಿಮ್ಮ ರಕ್ತ ಈ ಭೂಮಿಗೆ ಹರಿಸದೆ ಬಿಡುವುದಿಲ್ಲ ಎಂದು ಧಮ್ಕಿ
ಮಂಗಳೂರು: ನಿಗೂಢವಾಗಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಅವರಿಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್ಗಳ ಮುಖಾಂತರ ಕೊಲೆ ಬೆದರಿಕೆ ಹಾಕಲಾಗಿದೆ.
ದಿಗಂತ್ ಪತ್ತೆಗಾಗಿ ಮಾರ್ಚ್ 1ರಂದು ಬಜರಂಗದಳ ಮುಖಂಡ ಭರತ್ ನೇತೃತ್ವದಲ್ಲಿ ಫರಂಗೀಪೇಟೆ ಬಂದ್ ನಡೆಸಲಾಗಿತ್ತು. ದಿಗಂತ್ ನಾಪತ್ತೆ ಹಿಂದೆ ಅನ್ಯಮತೀಯರ ಹಾಗೂ ಗಾಂಜಾ ಗ್ಯಾಂಗ್ ಕೈವಾಡ ಎಂದು ಪ್ರತಿಭಟನೆ ವೇಳೆ ಭರತ್ ಕುಮ್ಡೇಲು ಆರೋಪಿಸಿದ್ದರು.
ದಿಗಂತ್ ಪತ್ತೆಯಾದ ಬೆನ್ನಲ್ಲೇ ಸಾಮಾಜಿ ಜಾಲತಾಣದಲ್ಲಿ ಕಿಡಿಗೇಡಿಗಳು ಭರತ್ ಕುಮ್ಡೇಲುಗೆ ಬೆದರಿಕೆ ಹಾಕಿದ್ದಾರೆ. ʼಭರತ್ ಕುಮ್ಮೇಲು ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ಶಾಂತಿಯುತವಾದ ಪರಂಗಿಪೇಟೆಯಲ್ಲಿ ಕೋಮುಗಲಭೆ ನಡೆಸಲು ಸಂಘ ಪರಿವಾರದ ಅಜೆಂಡ ಇತ್ತು. ಅದು ನಡೆಯಲಿಲ್ಲ, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಬಣ್ಣ ಬಳಿಯಲು ನೋಡಿದರು. ಆದರೆ, ಪೊಲೀಸ್ ಇಲಾಖೆಯ ಕಠಿಣ ಶ್ರಮದಿಂದ ಚಾನ್ಸ್ ಸಿಕ್ಕಿಲ್ಲ. ದಿಗಂತ್ ಪತ್ತೆಹಚ್ಚಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು.
ದಿಗಂತ್ ಅಪರಣ ಪ್ರಕರಣವನ್ನು ಭರತ್ ಕುಮ್ಮೇಲುಗೆ ಮುಸಲ್ಮಾನರ ತಲೆಗೆ ಕಟ್ಟುವ ಹುನ್ನಾರವಿತ್ತು. ಇವನು ಇನ್ನು ಎಲ್ಲಿಯಾದರೂ ಮುಸಲ್ಮಾನರ ಹೆಸರು ಎತ್ತಿದರೆ ಅದೇ ಪ್ರತಿಭಟನೆ ಮೇಲೆ ದಾಳಿ ಮಾಡುತ್ತೇವೆ. ಮತ್ತೆ ಇಲ್ಲಿ ಕೋಮು ಗಲಭೆ ಉಂಟಾದರೆ ನಾವು ಜವಾಬ್ದಾರರಲ್ಲ ಎಚ್ಚರಿಕೆ, ಇವನ ಬಗ್ಗೆ ಕ್ರಮ ತೆಗಿದುಕೊಳ್ಳಿ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್ ಹಾಕಲಾಗಿದೆ. ಭರತ್ ಕುಮ್ಡೇಲು 2017ರಲ್ಲಿ ನಡೆದ ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.