ಕನಕಗಿರಿ : ಮಗುವಿಗೆ ಅನಾರೋಗ್ಯವಾಗಿದ್ದರಿಂದ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದರೆ ಗುಣಮುಖವಾಗಬಹುದೆಂದು ತಿಳಿದು ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದ್ದು, ಬಳಿಕ ಗುಣ ಪಡಿಸಲು ಮನೆಮದ್ದು ಮಾಡಿದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಮಗು ಮೃತಪಟ್ಟ ವೇಳೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ‘ಸುಟ್ಟಗಾಯಗಳಿಂದ ನಂಜಾಗಿ ಮಗು ಸಾವನ್ನಪ್ಪಿದೆ’ ಎಂದು ತಿಳಿಸಿದ್ದಾರೆ. ಈ ಕುರಿತು ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ್ ಎಂಬುವವರು ನೀಡಿದ ದೂರಿನ ಮೇರೆಗೆ ಮಗುವಿನ ಸಾವಿನ ಕುರಿತು ಎಫ್ಐಆರ್ ದಾಖಲಾಗಿತ್ತು.
ಮೊದಲಿಗೆ 2024ರ ನವೆಂಬರ್ನಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಮಗುವಿನ ಕಾಯಿಲೆ ವಾಸಿಯಾಗಿರದ ಕಾರಣ, ಮಗುವಿಗೆ ಅಗರಬತ್ತಿ ಬೆಂಕಿಯಿಂದ ಬಿಸಿ ಮಾಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದನ್ನು ಕೇಳಿದ ತಾಯಿ ಅದರ ಪ್ರಯೋಗ ಮಾಡಿದ್ದು, ಇದೀಗ ಮಗು ಸಾವಿಗೀಡಾಗಿದೆ. ಈ ಪ್ರಕರಣ ಕುರಿತು ಆರೋಪಿ ತಾಯಿಯ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.