ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಒಂದು ಮೀನು ಗಂಟಲೊಳಗೆ ಹೋದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಭಾನುವಾರ ನಡೆದಿದೆ. ಮೃತ ಯುವಕನನ್ನು ಪುತ್ತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 4.30ರ ಸುಮಾರಿಗೆ ಆದರ್ಶ್ ಸ್ನೇಹಿತರೊಂದಿಗೆ ಗದ್ದೆಗೆ ನೀರು ಹಾಯಿಸಿ ಮೀನು ಹಿಡಿಯುತ್ತಿದ್ದಾಗ ಈ ಘಟನೆ ನಡೆದಿದೆ.
ಇನ್ನೊಂದು ಮೀನನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಮೀನೊಂದು ಆತನ ಬಾಯಿ ಕಚ್ಚಿಕೊಂಡು ಗಂಟಲೊಳಗೆ ಹೋಗಿ ಸಿಲುಕಿಕೊಂಡಿದೆ. ಕೂಡಲೇ ಯುವಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಆದರ್ಶ್ ಮೃತದೇಹವನ್ನು ಕಾಯಂಕುಲಂ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























