ಕಾಂಗ್ರೆಸ್ನವರಿಂದಲೇ ಕೊಲೆ ಎಂದು ಆರೋಪಿಸಿದ ತಾಯಿ
ಚಂಡೀಗಢ: ಹರ್ಯಾಣದ ಯುವ ಕಾಂಗ್ರೆಸ್ ಕಾರ್ಯಕರ್ತೆಯ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ನ ಕೆಲವರ ಕೈವಾಡ ಇದೆ ಎಂದು ಆಕೆಯ ತಾಯಿ ಆರೋಪಿಸಿದ ಬೆನ್ನಿಗೆ ಹರ್ಯಾಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪುರಸಭೆ ಚುನಾವಣೆಗೆ ಒಂದು ದಿನ ಮೊದಲು ಹರ್ಯಾಣದ ರೋಹ್ಟಕ್ ಜಿಲ್ಲೆಯ ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್ಕೇಸ್ನಲ್ಲಿ ಹಿಮಾನಿ ನರ್ವಾಲ್ ಎಂಬ 22ರ ಹರೆಯದ ಯುವತಿಯ ಶವ ಪತ್ತೆಯಾಗಿತ್ತು.
ಹಿಮಾನಿ ನರ್ವಾಲ್, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಪಕ್ಷದಲ್ಲಿ ಈ ಯುವತಿ ಕ್ಷಿಪ್ರವಾಗಿ ಮೇಲಕ್ಕೇರುತ್ತಿರುವುದು ಕಾಂಗ್ರೆಸ್ನ ಕೆಲವರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿತ್ತು. ಹೀಗಾಗಿ ಅವರೇ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹಿಮಾನಿಯ ತಾಯಿ ನಿನ್ನೆ ಆರೋಪಿಸಿದ್ದರು. ಈ ಹತ್ಯಾ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಕಾಂಗ್ರೆಸ್ ನಾಯಕರು ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ.
ನನ್ನ ಮಗಳು ಕಾಂಗ್ರೆಸ್ಗಾಗಿ ಬಹಳಷ್ಟು ತ್ಯಾಗ ಮಾಡಿದ್ದಳು ಮತ್ತು ಪಕ್ಷದ ಸದಸ್ಯರು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಹಿಮಾನಿಯ ಏರುತ್ತಿರುವ ರಾಜಕೀಯ ಜೀವನದಿಂದ ಪಕ್ಷದ ಕೆಲವು ಜನರು ಬೆದರಿಕೆಗೆ ಒಳಗಾಗಿರಬಹುದು, ಆದ್ದರಿಂದ ಅವರು ಕೊಲೆಯಲ್ಲಿ ಭಾಗಿಯಾಗಿರಬಹುದು ಎಂದು ಹಿಮಾನಿಯ ತಾಯಿ ಸವಿತಾ ಆರೋಪಿಸಿದ್ದಾರೆ.
























