ಭಾರತ, ಚೀನಾದಲ್ಲೂ ಭೂಮಿ ಕಂಪಿಸಿದ ಅನುಭವ
ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ನೇಪಾಳದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿರುವ ಜನರಿಗೆ ಭೂಕಂಪದ ಅನುಭವ ಆಗಿದೆ. ಭಾರತ,ಚೀನಾ ಮತ್ತು, ಟಿಬೆಟ್ನ ಕೆಲವು ಭಾಗಗಳಲ್ಲೂ ಭೂಕಂಪದ ಅನುಭವ ಆಗಿದೆ.
ನೇಪಾಳದ ಮಧ್ಯ ಭಾಗದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಭೂಕಂಪದ ಕೇಂದ್ರ ಬಿಂದು ಇದೆ ಎಂದು ಹೇಳಲಾಗಿದೆ. ಭೂಕಂಪದ ಕೇಂದ್ರಬಿಂದು ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿದ್ದು, ಭೂಕಂಪ ಬೆಳಿಗ್ಗೆ 2.51ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.
ಭೂಕಂಪದ ಪರಿಣಾಮ ಯಾವುದೇ ಸಾವುನೋವುಗಳು ಅಥವಾ ಗಂಭೀರ ಹಾನಿಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ನೇಪಾಳವು ಹೆಚ್ಚು ಭೂಕಂಪ ಪೀಡಿತ ಪ್ರದೇಶವಾಗಿರುವುದರಿಂದ, ಜನರು ಎಚ್ಚರಿಕೆಯಿಂದಿರಲು ಮತ್ತು ನಂತರದ ಭೂಕಂಪಗಳ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಭೂಕಂಪದ ನಂತರದ ಸಣ್ಣ ಪಶ್ಚಾತ್ ಕಂಪನಗಳಿಗೆ ಸಿದ್ಧರಾಗಿರಿ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ರಾಜಧಾನಿ ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲೂ ಜನರಿಗೆ ಕಂಪನದ ಅನುಭವವಾಗಿತ್ತು. ಭೂಕಂಪ ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.