ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣ ಸಂಬಂಧ ಕಲ್ಲು ತೂರಿದ ಸಾವಿರಕ್ಕೂ ಅಧಿಕ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಲಭೆಯಲ್ಲಿ ಇದ್ದವರು ಒಂದು ಸಾವಿರಕ್ಕೂ ಹೆಚ್ಚು ಎಂದು ಪೊಲಿಸರು ಅಧಿಕೃತವಾಗಿ ನಮೂದಿಸಿದ್ದಾರೆ. ಎಫ್ಐಆರ್ ಪ್ರತಿಯಲ್ಲಿ ಘಟನೆಯ ಸಂಪೂರ್ಣ ಮಾಹಿತಿ ಇದೆ.
ಆರಂಭದಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧಿಸಿ ಠಾಣೆಯಲ್ಲಿ ಪೊಲೀಸರು ಇರಿಸಿದ್ದರು. ಫೆ.9ರಂದು ಕಲ್ಯಾಣಗಿರಿಯ ಪಾಂಡುರಂಗ ಅಲಿಯಾಸ್ ಸತೀಶ್ನನ್ನು ಠಾಣೆಗೆ ಕರೆತರಲಾಗಿತ್ತು. ರಾತ್ರಿ 8.30ಕ್ಕೆ ಠಾಣೆಯ ಬಳಿ ಮುಸ್ಲಿಂ ಯುವಕರು ಜಮಾಯಿಸಿ ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಯುವಕರ ಕೂಗಾಟ ಆರಂಭಿಸಿದ್ದಾರೆ. 9.15 ಗಂಟೆಗೆ ಏಕಾಏಕಿ 1,000ದಷ್ಟು ಮುಸ್ಲಿಂ ಯುವಕರ ಗುಂಪು ಜಮಾಯಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಗಲಭೆ ಸೃಷ್ಟಿಸಿದ್ದಾರೆ.
ಪೊಲೀಸರು ಎಷ್ಟೇ ಹೇಳಿದರೂ ಕೇಳದ ಗುಂಪು ಏಕಾಏಕಿ ಪೊಲೀಸರ ಮೇಲೆ, ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿದರು. ಕಲ್ಲು ತೂರಾಟಕ್ಕೆ ಪೊಲೀಸ್ ಠಾಣೆಯ ಗಾಜು, ಕಿಟಕಿ ಪುಡಿ ಪುಡಿ ಆಗಿದೆ. ಬಂದೋಬಸ್ತ್ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲು ತೂರಾಟ ಮಾಡಿದರು. ರಸ್ತೆ ಮೇಲೆ ವಾಹನ ಓಡಾಟ ಮಾಡದಂತೆ ಬೆಂಕಿ ಹಚ್ಚಿ ಪುಂಡಾಟ ಮಾಡಿದ್ದಾರೆ. ಪೊಲೀಸರ ಮೇಲೆ ಮನಬಂದಂತೆ ಕಲ್ಲು ತೂರಾಟ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ. ಹಲವರು ಪೊಲೀಸರು ಕಲ್ಲುತೂರಾಟದಿಂದ ಗಾಯಗೊಂಡಿದ್ದಾರೆ. ಸಾರ್ವಜನಿಕರಿಗೂ ಗಾಯವಾಗಿದೆ. ಡಿಸಿಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದರು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿ ಮುಸ್ಲಿಂ ಯುವಕರ ಗುಂಪು ಚದುರಿಸಲಾಯಿತು. ಅಧಿಕಾರಿಗಳ ಮೇಲೆ ಹಲ್ಲೆ ನಿಂದನೆ, ಸರ್ಕಾರಿ ಆಸ್ತಿ ವಾಹನಗಳ ಜಖಂ ಸೇರಿ ಆಸ್ತಿಪಾಸ್ತಿ ಹಾನಿಯಾಗಿದೆ. ಅಕ್ರಮ ಗುಂಪು ಕಟ್ಟಿ ಹಾನಿಯುಂಟು ಮಾಡಿದ ಮುಸ್ಲಿಂ ಯುವಕರ ಗುಂಪಿನ ಮೇಲೆ ಕ್ರಮಕ್ಕೆ ಎಂದು ಉದಯಗಿರಿ ಠಾಣೆಯ ಪಿಎಸ್ಐ ಸುನೀಲ್ ದೂರು ನೀಡಿದ್ದರು. ಈ ಪ್ರಕಾರ 1,000ಕ್ಕೂ ಅಧಿಕ ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಅವರನ್ನು ಬಂಧಿಸುತ್ತಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ : 1,000ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್ಐಆರ್
