ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿರುವುದು ಪಕ್ಷದ ಸಕಲ ಮಟ್ಟದ ಶ್ರಮ, ಸಂಘಟನೆ ಮತ್ತು ಜನಪರ ರಾಜಕೀಯದ ಫಲವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯ ಅವರ ದೃಢನಿಶ್ಚಯ, ಅಭಿವೃದ್ಧಿ ಪರ ಆಜಂಡಾ. ಮತ್ತು ಕೇಂದ್ರ ಸರ್ಕಾರದ ಸಮರ್ಥ ಕಾರ್ಯಪದ್ಧತಿ ಜನತೆಯ ವಿಶ್ವಾಸವನ್ನು ಮತ್ತೆ ಗಳಿಸಿತು. ಪಕ್ಷದ ಬೂತ್ ಮಟ್ಟದ ಬಲವಾದ ತಂತ್ರ, ಸುಸಂಘಟಿತ ಪ್ರಚಾರ ಯಂತ್ರ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ನಿರ್ಧಾರಾತ್ಮಕವಾಗಿ ಪರಿಹರಿಸುವ ನೇತೃತ್ವದ ಫಲವಾಗಿ ದೆಹಲಿಯಲ್ಲಿ ಈ ಜಯ ಸಾಧ್ಯವಾಯಿತು ಎಂದು ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಬಿಜೆಪಿ ಇನ್ನೂ ಆಂತರಿಕ ಕಲಹ ಮತ್ತು ಸಂಘಟನಾ ದೌರ್ಬಲ್ಯದಿಂದ ಬಳಲುತ್ತಿದೆ. ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳು ಮತ್ತು ಗುಂಪು ರಾಜಕಾರಣದಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ದೆಹಲಿಯಲ್ಲಿ ಪಕ್ಷ ಏಕತೆ ಮತ್ತು ಶಿಸ್ತಿನ ಕಾರ್ಯಪದ್ಧತಿಯನ್ನು ಅನುಸರಿಸಿದರೆ, ಕರ್ನಾಟಕದಲ್ಲಿ ಕೆಲವು ನಾಯಕರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಒಡಕಲುಟಿದಿರುವುದು ಗಂಭೀರ ಸಮಸ್ಯೆಯಾಗುತ್ತಿದೆ. ಇದರಿಂದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಒಂದು ರೀತಿಯ ಅಸ್ಥಿರತೆ ಉಂಟಾಗಿದೆ. ಈ ಸನ್ನಿವೇಶವನ್ನು ಸರಿಪಡಿಸದೇ ಸವಾಲುಗಳನ್ನು ಎದುರಿಸದೇ ಹೋದರೆ ಮುಂಬರುವ ಚುನಾವಣೆಯ ಕಠಿಣತೆಯನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.
ಪಕ್ಷದ ಶಕ್ತಿ ಪುನರ್ ನಿರ್ಮಿಸಲು ತಕ್ಷಣದ ಕ್ರಮ ಅಗತ್ಯ :
ಪಕ್ಷದ ಯಶಸ್ಸು ಯಾವುದೇ ಒಬ್ಬ ವ್ಯಕ್ತಿಯ ಸಾಧನೆ ಅಲ್ಲ; ಇದು ಶ್ರದ್ಧೆ, ಶ್ರಮ, ಮತ್ತು ಸಮೂಹ ಶಕ್ತಿಯ ಪ್ರತೀಕ. ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಬೇಕಾದರೆ ಎಲ್ಲಾ ನಾಯಕರೂ ಒಗ್ಗೂಡಬೇಕು, ಸಂಘಟನೆಯ ಶಕ್ತಿಯನ್ನು ಪುನರ್ ನಿರ್ಮಿಸಬೇಕು ಮತ್ತು ಗಟ್ಟಿ ತಂತ್ರವನ್ನು ಅನುಸರಿಸಬೇಕು. ಪಕ್ಷದ ಹಿತಾಸಕ್ತಿಯನ್ನು ಮೊದಲಿಗಿಟ್ಟು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸಹಕಾರ ಮತ್ತು ಏಕತೆ ಯೋಗವನ್ನು ತರುವ ಹಂತ ಕಡ್ಡಾಯವಾಗಿದೆ.
ದೆಹಲಿಯ ಗೆಲುವು ನಮಗೆ ಪಾಠವಾಗಬೇಕು ಹಾಗೂ ಒಳಜಗಳ ಮುಗಿದು, ಕಾರ್ಯಪದ್ಧತಿಯಲ್ಲಿ ಸ್ಪಷ್ಟತೆ ಮತ್ತು ಶಿಸ್ತು ಇರಬೇಕು. ಕರ್ನಾಟಕದ ಜನತೆ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ. ಆದರೆ ಅವರ ವಿಶ್ವಾಸವನ್ನು ಸಂಪಾದಿಸಲು ಪಕ್ಷದ ಒಳಾಂಗಣವನ್ನು ಶುದ್ಧಗೊಳಿಸಿ, ಬಲಿಷ್ಠಗೊಳಿಸಬೇಕಾಗಿದೆ ಎಂದು ಕಿವಿ ಮಾತು ಹೇಳಿದ್ದಾರೆ.