ಪುತ್ತೂರು: ಚಂದಳಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ರೈ ಭಾಷಣದಲ್ಲಿ ದಯಾನಂದರು ನನಗೆ ಮತ ಹಾಕಿದ್ದಾರೆಂದು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಹತ್ತು ವರ್ಷಗಳ ಹಿಂದೆ ಅವರು ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದರು. ಆಗ ಅವರು ಬಿಜೆಪಿಯಲ್ಲಿ ಅನ್ಯೋನ್ಯತೆಯಲ್ಲಿದ್ದರು ಹೊರತು ಈಗಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ದಯಾನಂದರು ಅಶೋಕ್ ರೈ ಅವರ ಮಾತಿಗೆ ತಲೆ ಅಲ್ಲಾಡಿಸಿದ್ದಾರೆಂದು ಹಿಂಸೆ ನೀಡುವುದು ಸರಿಯಲ್ಲ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚಂದಳಿಕೆಯಲ್ಲಿ ಯುವಕೇಸರಿ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಯುವಕೇಸರಿ ಬಗ್ಗೆ ಮಾತನಾಡಿ ಯುವಕೇಸರಿಯ ಕಾರ್ಯಕರ್ತರು ಕೂಡಾ ನನಗೆ ಮತ ಹಾಕಿರಬಹುದು ಎಂಬುದನ್ನು ನಾನು ಕೇಳಿಸಿಕೊಂಡಿರುವುದು ಬಿಟ್ಟರೆ ದಯಾನಂದರು ನನಗೆ ಮತ ಹಾಕಿದ್ದಾರೆ ಎಂದು ಎಲ್ಲಿಯೂ ಉಲ್ಲೇಖ ಆಗಿಲ್ಲ. ಆದರೆ ದಯಾನಂದರು ಮತ ಹಾಕಿ ತಲೆ ಅಲ್ಲಾಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದೆ. ಈ ರೀತಿ ಹಿಂಸೆ ಕೊಡುವುದು ಸರಿಯಲ್ಲ ಎಂದು ಅವರು ಹೇಳಿದರು.
ನಾನು ನನ್ನ ಜೀವಮಾನದಲ್ಲಿ ಸಂಘಟನೆಯ ಶಿಸ್ತು ಮತ್ತು ರಾಜಕೀಯವಾಗಿ ನಂಬಿಕೊಂಡು ಬಂದಿರುವಂತಹ ಪಾರ್ಟಿಯ ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಿಕೊಂಡು ಬಂದಿರುವಂತಹ ವ್ಯಕ್ತಿಯಾಗಿದ್ದು, ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರ ಹಾಗೆ ಗೆಲ್ಲಿನಿಂದ ಗೆಲ್ಲಿಗೆ ಹಾರುವ ರಾಜಕಾರಣಿ ಅಲ್ಲ ಎಂದವರು ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಯತೀಂದ್ರ ಕೊಚ್ಚಿ, ಸುನಿಲ್ ದಡ್ಡು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜತ್ರೆ, ನಿತೇಶ್ ಶಾಂತಿವನ, ಮಹೇಶ್ ಕೇರಿ ಉಪಸ್ಥಿತರಿದ್ದರು.