ವಿಟ್ಲ: ವಿಟ್ಲದ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭ. ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ. 1008 ಶ್ರೀ ಮಹಾವೀರ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಭಾನುವಾರ ಅರ್ಕುಳ ಬೀಡಿನಿಂದ ನೂತನ ಭ. ಶ್ರೀ 1008 ಚಂದ್ರನಾಥ ಸ್ವಾಮಿ ತೀರ್ಥಂಕರರ ಪಂಚಲೋಹದ ಮೂರ್ತಿಯನ್ನು ವಿಟ್ಲ ಜೈನ ಬಸದಿಗೆ ತರಲಾಯಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪ ಮೂರ್ತಿಯನ್ನು ಸ್ವಾಗತಿಸಲಾಯಿತು. ಬಳಿಕ ಅಲ್ಲಿಂದ ಚೆಂಡೆ, ಕುಣಿತ ಭಜನೆಯ ತಂಡಗಳ ಮೂಲಕ ಬಸದಿಗೆ ವೈಭವದಿಂದ ತರಲಾಯಿತು. ತೆರೆದ ವಾಹನದ ಮೂಲಕ ಭ| ಶ್ರೀ ೧೦೦೮ ಚಂದ್ರನಾಥ ಸ್ವಾಮಿ ತೀರ್ಥಂಕರರ ಪಂಚಲೋಹದ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು, ಬಸದಿ ಸಮೀಪ ವಿವಿಧ ವೈದ್ಧಿಕ ವಿಧಿವಿಧಾನ ನಡೆಸಲಾಯಿತು.
ಶ್ರೀ ಚಂದ್ರನಾಥ ಸ್ವಾಮಿ ಬಸದಿ ಆನುವಂಶಿಕ ಆಡಳಿತ ಮೊಕ್ತೇಸರ ಡಿ. ವಿನಯ ಕುಮಾರ್, ಜೀರ್ಣೋದ್ಧಾರ ಮತ್ತು ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಜೀತೇಶ್ ಎಂ., ಕಾರ್ಯದರ್ಶಿ ದರ್ಶನ್ ಜೈನ್, ಗೌರವ ಸಲಹೆಗಾರರಾದ ರತ್ನರಾಜ ಶೆಟ್ಟಿ, ಕೆ. ಶೋಭಾಕರ್ ಬಲ್ಲಾಳ್, ಕೆ. ಭರತ್ ಬಲ್ಲಾಳ್, ಜಿನಚಂದ್ರ ಶೆಟ್ಟಿ, ರತ್ನಾಕರ್ ಜೈನ್, ಪುಷ್ಪರಾಜ್ ಹೆಗ್ಡೆ, ಸುದರ್ಶನ್ ಜೈನ್ ಪಂಜಿಕಲ್ಲು, ನೇಮಿರಾಜ್ ಅರಿಗ, ಸುಭಾಶ್ಚಂದ್ರ ಜೈನ್, ಸತೀಶ್ ಪಡಿವಾಳ್, ಶ್ರೀಮಂದಾರ್ ಜೈನ್, ಪ್ರಮುಖರಾದ ಶ್ರುತ ಜಿತೇಶ್, ಪ್ರವೀಣ್ ಇಂದ್ರ ವೇಣೂರು, ಮದ್ವರಾಜ್, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್, ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಡ್ಯ ನರ್ಸಪ್ಪ ಪೂಜಾರಿ, ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ವಿಟ್ಲ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಪ್ರಮುಖರಾದ ರಾಧಾಕೃಷ್ಣ ನಾಯಕ್, ಸುಭಾಶ್ಚಂದ್ರ ನಾಯಕ್, ರಮಾನಾಥ ವಿಟ್ಲ, ಶ್ರೀನಿವಾಸ ಶೆಟ್ಟಿ ಕೊಲ್ಯ ಮೊದಲಾದವರು ಉಪಸ್ಥಿತರಿದ್ದರು.