ಬಂಟ್ವಾಳ : ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಯಾಗ್ನಲ್ಲಿದ್ದ 10.08 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3000 ರೂಪಾಯಿ ನಗದು ಕಳ್ಳತನವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯಲಹಂಕ ನ್ಯೂಟೌನ್ ನಿವಾಸಿ ರಾಜಗೋಪಾಲ್ ಕಾರಂತ್ (68) ಎಂಬವರು ಪತ್ನಿಯ ತವರು ಮನೆಯಾದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ್ಗೆ ಕುಟುಂಬದ ಕಾರ್ಯಕ್ರಮಕ್ಕೆಂದು ಫೆಬ್ರವರಿ 1ರಂದು ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್ನಿಂದ ಕೆಎಸ್ಆರ್ಟಿಸಿ ಬಸ್ಗೆ ಪತ್ನಿ ಮತ್ತು ಅಳಿಯನೊಂದಿಗೆ ಮನೆಯಿಂದ ಚಿನ್ನವನ್ನು ಬಾಕ್ಸ್ನಲ್ಲಿ ಇಟ್ಟುಕೊಂಡು ಅದರ ಜೊತೆಯಲ್ಲಿ 3000 ರೂ ಬ್ಯಾಗ್ನಲ್ಲಿರಿಸಿ ಹೊರಟಿದ್ದರು.
ಕುಣಿಗಲ್ ಬಳಿ ಬಸ್ ನಿಂತಾಗ, ಅವರ ಹೆಂಡತಿ ಮತ್ತು ಅಳಿಯ ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗುಗಳನ್ನು ಬಸ್ಸಿನಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿದ್ದಾರೆ. ಫೆಬ್ರವರಿ 2ರಂದು ಕಾರಿಂಜ ಕ್ರಾಸ್ ತಲುಪಿದ ಬಳಿಕ ಬ್ಯಾಗ್ ತೆರೆದಾಗ 144 ಗ್ರಾಂ ಚಿನ್ನ ಮತ್ತು ನಗದು ನಾಪತ್ತೆಯಾಗಿತ್ತು. ಬಸ್ಸಿನ ಒಳಗೆ ಅಥವಾ ಕುಣಿಗಲ್ನ ಹೋಟೆಲ್ ಬಳಿ ಕಳ್ಳತನ ನಡೆದಿರುವ ಬಗ್ಗೆ ರಾಜಗೋಪಾಲ್ ಶಂಕೆ ವ್ಯಕ್ತಪಡಿಸಿದ್ದಾರೆ.