ಪುತ್ತೂರು: ಶಾಲೆ ಹಾಗೂ ದೇವಸ್ಥಾನಗಳಲ್ಲಿ ರಾಜಕೀಯ ಮಾಡಬಾರದು, ಈ ಎರಡು ಕ್ಷೇತ್ರದಲ್ಲಿ ರಾಜಕೀಯ ಮಾಡಿದ್ರೆ ಅದು ಎಂದೂ ಉದ್ದಾರ ಆಗಲು ಸಾಧ್ಯವಿಲ್ಲ. ಇದನ್ನು ಶಾಸಕನಾಗಿ ನಾನು ಸಹಿಸುವುದೇ ಇಲ್ಲ, ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ರಾಜಕೀಯ ಮಾಡಿ ಮಕ್ಕಳ ಭವಿಷ್ಯವನ್ನು ಹಾಳುಮಾಡಬೇಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಲ್ಲಿ ನೂತನ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಣಿಕ್ಕರ ಶಾಲೆ ಒಂದು ಕಾಲದಲ್ಲಿ ಬೀಳುವ ಹಂತದಲ್ಲಿತ್ತು. ಮಕ್ಕಳು ಮರದಡಿ ಕುಳಿತು ಪಾಠ ಕೇಳುತ್ತಾರೆಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಆಗ ನಾನು ಶಾಸಕನಾಗಿರಲಿಲ್ಲ. ಡಿ.ವಿ. ಸದಾನಂದ ಗೌಡರ ಜೊತೆ ಮಾತನಾಡಿ ಶಾಲೆಗೆ ಕೊಠಡಿ ಮಂಜೂರು ಮಾಡಿಸಿದ್ದೆ ಎಂದ ಅವರು, ಮಣಿಕ್ಕರ ಶಾಲೆಯಲ್ಲಿ ಈಗ ಕೊಠಡಿ ಕೊರತೆ ಇಲ್ಲ ಮಕ್ಕಳ ಕೊರತೆ ಇದೆ ಶಿಕ್ಷಕರು , ಪೋಷಕರು ಸೇರಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಸದಸ್ಯೆ ಶುಭಲತಾ, ಸುಂದರ, ದಾನಿಗಳಾದ ಸುನಿಲ್, ಜಗನ್ನಾಥ ರೈ, ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್, ಪ್ರೌಢ ಶಾಲೆಯ ಕಾಯಾಧ್ಯಕ್ಷ ಗಫೂರ್ ಸಾಹೆಬ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ನಿಳಿನಿ, ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಕೆ ಕೆ ಮಾಸ್ಟರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ ವಂದಿಸಿದರು.
























