ಪುತ್ತೂರು: ಹೊರ ಜಿಲ್ಲೆಯಿಂದ ಅಂದರೆ ಘಟ್ಟ ಪ್ರದೇಶದಿಂದ ಬಂದು ಜೆಸಿಬಿ, ಹಿಟಾಚಿ ಇಟ್ಟುಕೊಂಡು ಕೆಲಸ ಮಾಡುತ್ತಿರುವವರ ಮೇಲೆ ಸ್ಥಳೀಯವಾಗಿ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ಮಾಡುವ ಮೂಲಕ ಒಂದು ರೀತಿಯ ಗೊಂದಲ ಉಂಟು ಮಾಡುತ್ತಿದ್ದು, ಇಂತಹಾ ಘಟನೆಗಳು ಮುಂದಿನ ದಿನಗಳಲ್ಲಿ ಪುನಾರಾವರ್ತನೆಯಾದಲ್ಲಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಈ ಕುರಿತು ಹೊರ ಜಿಲ್ಲೆಯಿಂದ ಬಂದ ಜೆಸಿಬಿ ಮಾಲಕರು ಹಾಗೂ ಆಪರೇಟರ್ಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹೊಟ್ಟೆಪಾಡಿಗಾಗಿ ಹಲವಾರು ವರ್ಷಗಳಿಂದ ಇಲ್ಲಿಗೆ ಬಂದು ಜೆಸಿಬಿ ಆಪರೇಟರ್ ಆಗಿ ದುಡಿದು ಮಾಲಕರಾಗಿರುವ ಘಟ್ಟ ಪ್ರದೇಶದ ಕೆಲವೊಂದು ಮಂದಿಗೆ ಜಿಲ್ಲೆ ಬಿಟ್ಟು ಹೋಗಬೇಕು ಎಂಬ ಸ್ಥಳೀಯರಿಂದ ಬೆದರಿಕೆ ಸ್ಥಳೀಯರಿಂದ ಆಗುತ್ತಿದ್ದು ಈ ರೀತಿ ಸಂವಿಧಾನದಲ್ಲಿ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಘಟ್ಟದವರು ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಜಿಲ್ಲೆಯ ಪ್ರತಿ ಸರಕಾರಿ ಇಲಾಖೆ ಆಗಲಿ ಇನ್ನಿತರ ಇಲಾಖೆಯಲ್ಲಿ ಬಹುತೇಕ ಹೊರ ಜಿಲ್ಲೆಗಳಿಂದ ಬಂದವರೇ ಅಂದರೆ ಶೇ.90 ಮಂದಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಈ ಜಿಲ್ಲೆಯಿಂದ ಓಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇಂತಹಾ ಕೆಲಸ ಮಾಡುವವರು ಷಂಡರು ಎಂದರು.
ಬಹುತೇಕ ಹಾಸನದವರಿಗೆ ಈ ರೀತಿ ಆಗುತ್ತಿದ್ದು, ಅವರನ್ನು ಓಡಿಸಿದರೆ ಇಲ್ಲಿಯ ಜನಸಾಮಾನ್ಯರಿಗೇ ಅನ್ಯಾಯ ಆಗುವುದು. ಈ ರೀತಿಯ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವವರಿಗೆ ಭವಿಷ್ಯವಿಲ್ಲ. ಇಂತಹಾ ಅನೈತಿಕ ಪೊಲೀಸ್ ಗಿರಿ ಇಲ್ಲಿ ಸಾಧ್ಯವಿಲ್ಲ. ಈ ಕುರಿತು ಶಾಸಕರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಗೃಹಸಚಿವರ ಮೂಲಕ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು. ಜಿಲ್ಲೆಗೆ ಕಳಂಕ ತರುವ ಕೆಲಸ ಮಾಡುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇಂಟಕ್ ಮಾಜಿ ಅಧ್ಯಕ್ಷ ಜಗದೀಶ್ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ನೊಂದ ಜೆಸಿಬಿ, ಹಿಟಾಚಿ ಆಪರೇಟರ್ಗಳು ಇಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಓಡಿಸುವ ಕೆಲಸವನ್ನು ಜೆಸಿಬಿ, ಹಿಟಾಚಿ ಯೂನಿಯನ್ನವರು ಮಾಡುತ್ತಿದ್ದಾರೆ. ಇಂತಹಾ ಕೆಲಸವನ್ನು ಬಿಟ್ಟುಬಿಡಲಿ. ಇಲ್ಲದಿದ್ದಲ್ಲಿ ಅವರಿಗೆ ಉಳಿಗಾಲವಿಲ್ಲ ಎಂದರು.
ಜೆಸಿಬಿ ಮಾಲಕ ಕುಮಾರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ಕಳೆದ 20 ವರ್ಷಗಳಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ಆದರೆ ಸ್ಥಳೀಯ ಕೆಲವೊಬ್ಬರು ವಾಟ್ಸಪ್ ಸಂದೇಶದ ಮೂಲಕ, ಕೆಲಸ ಮಾಡುವಲ್ಲಿ ಬಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನದಡಿ ಬದುಕುವ ಹಕ್ಕು ನಮಗಿಲ್ಲವೇ ಎಂದು ಪ್ರಶ್ನಿಸಿದರು.
ದಬ್ಬಾಳಿಕೆ, ಬೆದರಿಕೆಗಳಿಗೆ ಒಳಗಾದ ಸುಭಾಶ್, ಆನಂದ್ ಮುಂತಾದವರು ತಮ್ಮ ನೋವನ್ನು ಸಭೆಯಲ್ಲಿ ತೋಡಿಕೊಂಡರು.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಜೆಸಿಬಿ ಮಾಲಕ ಕುಮಾರ್, ಮುಂಡೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ನರಿಮೊಗರು ಸಿ.ಎ.ಬ್ಯಾಂಕ್ಮಾಜಿ ಅಧ್ಯಕ್ಷ ಬಾಬು ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹೊನ್ನಪ್ಪ ಕೈಂದಾಡಿ ಕಾರ್ಯಕ್ರಮ ನಿರೂಪಿಸಿದರು.
























